ಕಂಡ ಕಂಡಲ್ಲಿ ತಾರೆಯರ ಜಾತ್ರೆ. ತಮ್ಮ ನೆಚ್ಚಿನ ನಟ ನಟಿಯನ್ನು ಕಾಣಲು ಮುಗಿಬಿದ್ದು ಜೈಕಾರ ಕೂಗುವ ಜನ. ಇದು ಈ ಹಿಂದಿನ ಚುನಾವಣೆಗೆ ಕಂಡುಬರುತ್ತಿದ್ದ ದೃಶ್ಯ. ಬಾರೀ ಪ್ರಮಾಣದಲ್ಲಿ ತಾರೆಯರದೇ ದರ್ಬಾರು. ತಮ್ಮ ಪಕ್ಷಕ್ಕೆ ಬೆಂಬಲ ಸೂಚಿಸುತ್ತಾ ಊರೆಲ್ಲ ಸುತ್ತಾಡಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡುತ್ತಿದ್ದು ಸರ್ವೇ ಸಾಮಾನ್ಯವಾಗಿತ್ತು.ಆದರೆ ಈ ಬಾರಿ ತಾರೆಯರ ಮೆರುಗು ಈ ಬಾರಿಯ ಚುನಾವಣೆಗೆ ಕೊಂಚ ನಿರಾಸದಾಯಕವಾಗಿದೆ.
ಆರಂಭದಲ್ಲಿ ಸಿಎಂ ಬೊಮ್ಮಾಯಿಗೆ ಕಿಚ್ಚ ಸುದೀಪ್ ತಮ್ಮ ಬೆಂಬಲವನ್ನು ಘೋಷಿಸಿದ್ದರು. ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಸಿಎಂ ಬೊಮ್ಮಾಯಿ, ಜೆ.ಪಿ.ನಡ್ಡಾ ಶಿಗ್ಗಾಂವ್ನಲ್ಲಿ ನಡೆಸಿದ ರೋಡ್ ಶೋಗೆ ನಟ ಕಿಚ್ಚ ಸುದೀಪ್ ಸಾಥ್ ನೀಡಿದ್ದರು.
ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದಿಂದ ದರ್ಶನ್ ಪುಟ್ಟಣ್ಣಯ್ಯ ಅಭ್ಯರ್ಥಿ. ಅಭಿಮಾನಿಗಳ ಪಾಲಿನ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗದೀಪ ಅವರು ದರ್ಶನ್ಗೆ ಬೆಂಬಲ ಸೂಚಿಸಿದ್ದರು.
ಅರಸೀಕೆರೆಯಲ್ಲಿ ಸಹಸ್ರಾರು ತಮ್ಮ ಬೆಂಬಲಿಗರೊಂದಿಗೆ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಲು ಮುಂದಾದ ಬಿಜೆಪಿ ಅಭ್ಯರ್ಥಿ ಜಿ ವಿ ಟಿ ಬಸವರಾಜ್ ಅವರಿಗೆ ಖ್ಯಾತ ಚಲನಚಿತ್ರ ನಟಿ ತಾರಾ ಸಾತ್ ನೀಡುವ ಮೂಲಕ ರೋಡ್ ಶೋಗೆ ತಾರಾ ಮೆರುಗು ನೀಡಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮಾಜಿ ಸಂಸದೆ ಹಾಗೂ ನಟಿ ದಿವ್ಯಾ ಸ್ಪಂದನ ಪ್ರಚಾರ ನಡೆಸಲಿದ್ದಾರೆ. ವಿಶ್ರಾಂತಿಯಲ್ಲಿದ್ದ ರಮ್ಯಾ ಮುಂದಿನ ಕೆಲವು ವಾರಗಳಲ್ಲಿ ಮಂಡ್ಯ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಂಗ್ರೆಸ್ ಪ್ರಚಾರವನ್ನು ಬಲಪಡಿಸಲು ಮರಳಿದ್ದಾರೆ ಎಂದು ವರದಿಯಾಗಿದ್ದರು ಈ ವರಗೆ ಪ್ರಚಾರ ಕಾರ್ಯದಲ್ಲಿ ಎಲ್ಲೂ ಕಾಣಿಸಿಕೊಂಡಿಲ್ಲ.
ಈ ಹಿಂದೆಯೆಲ್ಲ ಮೇರು ನಟ ನಟಿಯರಿಂದ ಸಹ ನಟ ನಟಿಯರು ಸಕ್ರೀಯವಾಗಿ ಚುನಾವಣೆ ಕಾರ್ಯದಲ್ಲಿ ಭಾಗವಹಿಸಿದ್ದರು.ಆದರೆ ಈ ಬಾರಿ ಅಭ್ಯರ್ಥಿಗಳ ಅಭಿಮಾನಿ ಬಳಗ ಮತ್ತು ಕಾರ್ಯಕರ್ತರದೇ ಹವಾ.