ನವದೆಹಲಿ: ದೇಶದ ಪ್ರಮುಖ ಖಾಸಗೀ ಬ್ಯಾಂಕ್ ಆಗಿರುವ ಹೆಚ್ಡಿಎಫ್ಸಿ ಬ್ಯಾಂಕ್ ನೀಡಿರುವ ಜಾಹೀರಾತೊಂದು ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೆ ಬ್ಯಾಂಕು ಸೈಬರ್ ವಂಚನೆಗಳ ವಿರುದ್ಧ ಜನರನ್ನು ಜಾಗೃತಗೊಳಿಸಲು ಅಭಿಯಾನದ ಜಾಹೀರಾತು ಬಿಡುಗಡೆ ಮಾಡಿತ್ತು. ದಿನೇ ದಿನೇ ಹೆಚ್ಚುತ್ತಿರುವ ಹಣಕಾಸು ವಂಚನೆಗಳ ಕುರಿತು ಜಾಗೃತಿ ಮೂಡಿಸುವ ಜಾಹೀರಾತನ್ನು ಎಚ್ಡಿಎಫ್ಸಿ ಬ್ಯಾಂಕ್ ಪ್ರಕಟಿಸಿದ್ದು ಜಾಹೀರಾತಿನಲ್ಲಿ ಬಳಸಲಾಗಿರುವ ಮಹಿಳೆಯ ಚಿತ್ರದಲ್ಲಿ ಹಣೆಯಲ್ಲಿ ಬಿಂದಿಯ ಬದಲು ಸಾರ್ವತ್ರಿಕ ‘ನಿಷೇಧ ಚಿಹ್ನೆ’ಯನ್ನು ಬಳಸಲಾಗಿದೆ. ಇದು ನೆಟ್ಟಿಗರ ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ. ನೆಟ್ಟಿಗರ ಪ್ರಕಾರ, ಹಿಂದೂ ಸಂಸ್ಕೃತಿಯಲ್ಲಿ ಬಿಂದಿಗೆ ಕುಂಕುಮಕ್ಕೆ ವಿಶೇಷ ಮಹತ್ವದ ಸ್ಥಾನವಿದೆ. ಎಚ್ಡಿಪಿಸಿ ಬ್ಯಾಂಕ್ ಬಿಂದಿ ಬದಲಿಗೆ ನಿಷೇಧ ಚಿಹ್ನೆಯನ್ನು (No Signal) ಬಳಸಿ ಅವಮಾನ ಮಾಡಿರುವುದು ಹಿಂದೂಗಳಿಗೆ ನೋವುಂಟುಮಾಡಿದೆ.
2022ರಲ್ಲಿ ಪ್ರಾರಂಭವಾದ ವಿಜಿಲ್ ಆಂಟಿ ಅಭಿಯಾನವು ಸುರಕ್ಷಿತ ಬ್ಯಾಂಕಿಂಗ್ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ರಾಷ್ಟ್ರದಾದ್ಯಂತ ನಾಗರಿಕರನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಿದೆ. ಸೈಬರ್ ವಂಚನೆ ಜಾಗೃತಿ ಅಭಿಯಾನಕ್ಕಾಗಿ ಬ್ಯಾಂಕ್, ನಟಿ ಅನುರಾಧಾ ಮೆನನ್ ಅವರನ್ನು ವಿಜಿಲ್ ಆಂಟಿ (vigil aunty)ಯಾಗಿ ನೇಮಿಸಿಕೊಂಡಿದೆ. ಸಾಮಾಜಿಕ ತಾಣ ಬಳಕೆದಾರಳಾದ ಉಜ್ವಲಾ ರೈ ಎಂಬುವವರು, ಹಿಂದೂ ವಿರೋಧಿ ಜಾಹೀರಾತಿಗಾಗಿ ಎಚ್ಡಿಎಫ್ಸಿ ಬ್ಯಾಂಕ್ ನ್ನು ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಎಚ್ಡಿಎಫ್ಸಿ ಬ್ಯಾಂಕ್ ಅನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ಸಮಯ ಬಂದಿದೆ. ಏಕೆಂದರೆ ಅವರು ಹಿಂದೂಗಳನ್ನು ತುಂಬಾ ದ್ವೇಷಿಸುತ್ತಾರೆ. ಸಾಕಷ್ಟು ವಿರೋಧದ ನಡುವೆಯೂ ಅವರು ಕ್ಷಮೆ ಕೋರಲು ಮುಂದಾಗಿಲ್ಲ. ಈ ಕಂಪನಿಯು ಗುಜರಾತಿ ಜೈನ್ ಒಡೆತನದಲ್ಲಿದೆ. ಅವರು ಕ್ಷಮೆಯಾಚಿಸಿದರೂ ನಾವು ಅವರನ್ನು ಬಹಿಷ್ಕರಿಸಬೇಕು ಮತ್ತು ಎಚ್ಡಿಎಫ್ಸಿಯ ಯಾವುದೇ ಸೇವೆಯನ್ನು ಎಂದಿಗೂ ಬಳಸಬಾರದು ಎಂದು ಹೇಳಿದ್ದಾರೆ.
ಹಿಂದೂಗಳಲ್ಲಿ ಬಿಂದಿಗೆ ಪವಿತ್ರ ಸ್ಥಾನವಿದೆ. ಜಾಹೀರಾತಿನಲ್ಲಿ ಪ್ರದರ್ಶಿಶಿತವಾಗಿರುವ ರೂಪದರ್ಶಿಯ ಹಣೆಗೆ ಬಿಂದಿಯ ಜಾಗಕ್ಕೆ ಜಾಗತಿಕ ನೋ ಸಿಂಬಲ್ ಬಳಸಿರುವುದು ಅಕ್ಷಮ್ಯ ಅಪರಾಧ ಮತ್ತು ಸಂಪೂರ್ಣವಾಗಿ ಅನುಚಿತ ವರ್ತನೆಯಾಗಿದೆ. ಎಲ್ಲ ಗ್ರಾಹಕರು ಎಚ್ಡಿಎಫ್ಸಿ ಬ್ಯಾಂಕಿನ ರಿಲೇಷನ್ಶಿಪ್ ಮ್ಯಾನೇಜರ್ನನ್ನು ಭೇಟಿಯಾಗಿ ಮತ್ತು ಈ ಜಾಹೀರಾತು ಕುರಿತು ವಿರೋಧ ವ್ಯಕ್ತಪಡಿಸಿ. ಅಲ್ಲದೇ, ಈ ಜಾಹೀರಾತನ್ನು ಕೈ ಬಿಟ್ಟು, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಎಂದು ಮತ್ತೊಬ್ಬ ಬಳಕೆದಾರರು ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಹಿಂದೂಗಳು ಎಚ್ಡಿಎಫ್ಸಿ ಬ್ಯಾಂಕಿನ ಈ ಜಾಹೀರಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಬ್ಯಾಂಕ್ ಈ ಜಾಹೀರಾತನ್ನು ಹಿಂಪಡೆದುಕೊಳ್ಳಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಬ್ಯಾಂಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬ್ಯಾಂಕ್ ಮೂಲಗಳ ಪ್ರಕಾರ ಶೀಘ್ರದಲ್ಲಿ ಆಡಳಿತವು ಪ್ರಕಟಣೆ ನೀಡಲಿದೆ.