ತಿಲಕರ ಕಾಲೇಜಿನ ವ್ಯಾಸಂಗದ ದಿನಗಳ ಬಗ್ಗೆ ಈಗಲೂ ನಗೆ ಬರಿಸುವಂತಹ ಮತ್ತು ಗೌರವ ಹುಟ್ಟಿಸುವಂತಹ ಎಷ್ಟೋ ಘಟನೆಗಳನ್ನು ಉಲ್ಲೇಖಿಸಬಹುದು. ತಿಲಕರ ಮಹಾಬುದ್ಧಿ ಶಕ್ತಿ, ನೈತಿಕ ಧೈರ್ಯ, ಸ್ವತಂತ್ರ ಮನೋವೃತ್ತಿ, ನಿಷ್ಠಾವಂತ ವ್ಯಕ್ತಿತ್ವ, ಕಲಿವಿನ ಬಗ್ಗೆ ಇದ್ದ ನಿಚ್ಚಳ ಭಕ್ತಿ, ಜ್ಞಾನಾರ್ಜನೆಗಾಗಿ ಇದ್ದ ಕಳಕಳಿ ಇವೆಲ್ಲವನ್ನೂ ಆಗಿನ ಕಾಲದ ಸಂಗತಿಗಳಿಂದ ಚೆನ್ನಾಗಿ ತಿಳಿಯಬಹುದು. ಅವರ ಅನಂತರದ ಜೀವನದಲ್ಲಿ, ತಿಲಕರು ಹಿರಿಯ ವಿದ್ವಾಂಸ, ಸಂಸ್ಕೃತ ಪಂಡಿತ ಮತ್ತು ಗಣಿತ ಶಾಸ್ತ್ರ ಪಟು ಎಂದು ಎಲ್ಲ ಕಡೆಯಲ್ಲಿಯೂ ಹೆಸರು ಗಳಿಸಿದರು. ಅದರಲ್ಲಿಯೂ ವೇದಗಳ ಪ್ರಾಚೀನತೆಯ ಬಗ್ಗೆ ಅವರು ನಡೆಸಿದ ಸಂಶೋಧನೆ ಮತ್ತು ಗೀತೆಯ ಮೇಲೆ ಅವರು ಬರೆದಿರುವ ಅದ್ಭುತವಾದ ವ್ಯಾಖ್ಯಾನ (ಗೀತಾಭಾಷ್ಯಗಳು ಅವರಿಗೆ ಕೀರ್ತಿ ತಂದಿವೆ. ಭಂಡಾರ್ಕರ್, ತೆಲಾಂಗ್, ರಾನಡೆ, ಫಿರೋಜ್ ಷಾ, ಗೋಖಲೆ, ಪರಾಂಜಪೆ ಮತ್ತು ಅನಿಬೆಸಂಟರಂತಹ ವಿದ್ವಾಂಸರೊಂದಿಗೆ ಆಗಾಗ ನಡೆಯುತ್ತಿದ್ದ ಸಣ್ಣಪುಟ್ಟ ವಾಗ್ವಾದಗಳಲ್ಲಿ ತಿಲಕ ವಿದ್ವತ್ತು ಮತ್ತು ಸಾಮರ್ಥ್ಯ ಇವುಗಳು ಪ್ರಕಾಶಕ್ಕೆ ಬರುತ್ತಿದ್ದುವು. ಡೆಕ್ಕನ್ ಕಾಲೇಜಿನಲ್ಲಿ ಅವರು ನಡೆಸಿದ ಅಭ್ಯಾಸವು ಅವರ ಸರ್ವತೋಮುಖ ಪಾಂಡಿತ್ಯಕ್ಕೆ ನಿಜವಾದ ಮತ್ತು ಭದ್ರವಾದ ಬುನಾದಿಯನ್ನು ಹಾಕಿಕೊಟ್ಟಿತು.
ತಿಲಕರು ಎಲ್.ಎಲ್.ಬಿ. ಪರೀಕ್ಷೆಗೆ ಓದುತ್ತಿರುವಾಗಲೂ ಈ ಅಭ್ಯಾಸ ತಪ್ಪಲಿಲ್ಲ. ಇಂಗ್ಲಿಷ್ ವ್ಯಾಖ್ಯಾನಕಾರರ ಮೂಲಕ ಭಾರತೀಯ ಕಾನೂನನ್ನು ಅಭ್ಯಸಿಸಲು ಅವರಿಷ್ಟಪಡಲಿಲ್ಲ; ಮನು, ಯಾಜ್ಞವಲ್ಕ, ನಾರದ ಇವರನ್ನು ಮೂಲ ಸಂಸ್ಕೃತದಲ್ಲಿಯೇ ಓದಲಿಚ್ಚಿಸಿದರು. ಈ ರೀತಿ ಬರಿಯ ಹಿಂದೂ ಕಾನೂನಿನ ಬಗ್ಗೆ ಮಾತ್ರವೇ ಅಲ್ಲ, ಬೇರೆ ವಿಷಯಗಳಿಗೂ ಅನ್ವಯವಾಗುತ್ತಿತ್ತು. ತಿಲಕರು, ಲಾ ಪದವಿಯನ್ನು ಪಡೆದರೂ, ಯಾವ ನ್ಯಾಯಾಲಯದಲ್ಲಿಯೂ ವಕೀಲರಾಗಿ ಕೆಲಸ ಮಾಡಲಿಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಅವರಿಗೆ ಕಾನೂನಿನ ಪರಿಚಯದ ಆಳವೆಷ್ಟೆಂದರೆ, ನುರಿತ ವಕೀಲರಂತೆ ಜನರಿಗೆ ಅರ್ಜಿಗಳನ್ನು ಬರೆದುಕೊಡುವುದೂ, ಬೇರೆ ವಕೀಲರಿಗೆ ಸಲಹೆ ಕೊಡುವುದೂ ಅವರಿಗೆ ಸರ್ವಸಾಧಾರಣ ವಿಷಯವಾಗಿತ್ತು. ಅವರು ಇದಕ್ಕೆಲ್ಲ.ಶುಲ್ಕವನ್ನು ವಿಧಿಸಿದ್ದರೆ ಲಕ್ಷಾಧಿಪತಿಯಾಗಬಹುದಿತ್ತು. ಬಹಳ ಕಾಲ ಅವರು ಲಾ ತರಗತಿಗಳನ್ನು ನಡೆಸಿ, ಎಲ್ಲಾ ವಿಷಯಗಳನ್ನೂ ತಾವೇ ಪಾಠಹೇಳುತ್ತಿದ್ದರು. ಒಮ್ಮೆ ಅವರು ನೀತಿಶಾಸ್ತ್ರದ ಮೇಲೆ ಮಾತನಾಡುತ್ತಿದ್ದಾಗ, ಅವರ ತರಗತಿಗೆ ಜಸ್ಟಿಸ್ ರಾನಡೆಯವರು ಬಂದು ಪಾಠವನ್ನು ಕೇಳುತ್ತಾ ಕುಳಿತರು. ಅವರು ಬಂದು ಕುಳಿತುದು ತಿಲಕರಿಗಾಗಲಿ ವಿದ್ಯಾರ್ಥಿಗಳಿಗಾಗಲಿ ತಿಳಿಯದು. ತಿಲಕರ ಜ್ಞಾನದ ವೈವಿಧ್ಯ, ಅಪಾರತೆಯ ಬಗ್ಗೆ ಅವರಿಗೆ ಅಚ್ಚರಿಯಾಗಿ, ಅವರನ್ನು ಮನಸಾರ ಅಭಿನಂದಿಸಿದರು.
ತಿಲಕರ ಮಾನಸಿಕ ಧೈರ್ಯದಷ್ಟೇ ಅವರ ದೈಹಿಕ ಬಲ, ಕೆಚ್ಚುಗಳೂ ಪ್ರಬುದ್ಧವಾಗಿರುವುದು. ಡೆಕನ್ನ ಕಾಲೇಜಿನಲ್ಲಿ ಜೂನಿಯರ್ ಬಿ.ಎ. ತರಗತಿಯಲ್ಲಿ ಇವರು ಓದುತ್ತಿದ್ದಾಗ, ಕೆಲವರು ವಿದ್ಯಾರ್ಥಿಗಳು ಕಾಲೇಜಿನ ಹಾಸ್ಟೆಲ್ಲಿನ ಮಹಡಿಯ ಮೇಲೆ ಕುಳಿತು ಮಾತನಾಡುತ್ತಿದ್ದರು. ಯುವಕರು ತಮ್ಮಲ್ಲಿ ತಾವೇ ಸೇರಿದಾಗ ಮಾತನಾಡುವ ವಿಷಯಗಳಿಗಾಗಲಿ, ರೀತಿ ಸ್ವಾತಂತ್ರ್ಯಕ್ಕಾಗಲಿ ಒಂದು ಮಿತಿಯಿರುವುದಿಲ್ಲ. ಆ ಕಟ್ಟಡಕ್ಕೆ ಬೆಂಕಿ ಬಿದ್ದು, ಮಹಡಿಯ ಮೆಟ್ಟಲುಗಳಿಂದ ಇಳಿದು ಹೋಗುವುದು ಅಸಾಧ್ಯವಾದರೆ, ಹೇಗೆ ತಪ್ಪಿಸಿಕೊಂಡು ಹೋಗುವುದೆಂದು ಒಬ್ಬ ವಿದ್ಯಾರ್ಥಿ ಕೇಳಿದ. ಉಳಿದ ವಿದ್ಯಾರ್ಥಿಗಳು ಹೇಗೆ ಏನು ಎಂದು ವಾಗ್ವಾದದಲ್ಲಿ ತೊಡಗಿರುವಾಗಲೇ, ತಿಲಕರು ಧೋತರವನ್ನು ಎತ್ತಿ ಸೊಂಟಕ್ಕೆ ಕಟ್ಟಿದುದೇ, ಮೇಲಿಂದ ಕೆಳಕ್ಕೆ ಧುಮುಕಿಯೇ ಬಿಟ್ಟರು. ಈ ಸಾಹಸದಿಂದ ತಿಲಕ ಸಹಪಾಠಿಗಳಿಗೆಲ್ಲ ಆಶ್ಚರ್ಯವಾಯಿತು. ಇನ್ನೆಲ್ಲಿ ಪೆಟ್ಟು ತಾಕಿದೆಯೋ ಎಂದು ಎಲ್ಲರೂ ಕಾತರದಿಂದ ಕೆಳಕ್ಕೆ ಧಾವಿಸಿದರು. ಎರಡು ಮಹಡಿಯೆತ್ತರದಿಂದ ಕೆಳಕ್ಕೆ ಧುಮುಕಿದ್ದ ತಿಲಕರು ನಿರಾತಂಕವಾಗಿ ಮತ್ತೆ ಮಹಡಿಯನ್ನು ಹತ್ತಿ ಬರುತ್ತಿದ್ದುದನ್ನು ಕಂಡು ಎಲ್ಲರಿಗೂ ಸಂತೋಷವೂ ಆಯಿತು, ಅಚ್ಚರಿಯೂ ಆಯಿತು. ಎಷ್ಟೋ ಬಾರಿ ತಿಲಕರು ಕಾಲೇಜಿನ ಈಜುಕೊಳದಲ್ಲಿ ಬಾತುಕೊಳಿಯಂತೆ ಹಾಯಾಗಿ ಬೆನ್ನ ಮೇಲೆ ತೇಲುತ್ತಾ ಕೈಯಲ್ಲಿ ರೊಟ್ಟಿಯನ್ನು ಹಿಡಿದುಕೊಂಡು ತಿನ್ನುತ್ತಿದ್ದುದೂ ಉಂಟು. ಅವರ ಅನಂತರದ ಜೀವನದಲ್ಲಿ, ಸಿಂಹಘಡಕ್ಕೆ ವಿಶ್ರಾಂತಿಗಾಗಿ ಅವರು ಹೋದಾಗ, ಅಲ್ಲಿಯ ಈಜುಕೊಳದಲ್ಲಿ ತಮ್ಮ ಮಕ್ಕಳಿಗೆ ಈಜುವುದನ್ನು ಕಲಿಸುವುದರಲ್ಲಿ ಅವರಿಗೆ ಸಂತೋಷವಾಗುತ್ತಿತ್ತು.
ತಿಲಕರು ಯಾವಾಗ, ಯಾರ ಮೇಲೆ, ಯಾವ ಕಾರಣಕ್ಕಾಗಿ ಎರಗಿಬೀಳುತ್ತಿದ್ದರೋ ಹೇಳಲು ಬರುತ್ತಿರಲಿಲ್ಲ. ಅವರು ನೇರವಾದ, ಬಿಚ್ಚುಮಾತಿನ, ಕೆಚ್ಚು ನುಡಿಯವರಾಗಿದ್ದರು. ತಿಲಕರ ಒಬ್ಬ ಸಹಪಾರಿಯು ತಾನು ಬಹಳ ನಿಶ್ಯಕ್ತನೆಂದು ತಿಳಿದು, ಯಾವ ಯಾವುದೋ ಗುಳಿಗೆಗಳನ್ನು ನುಂಗುತ್ತಿದ್ದ, ಔಷಧಿಗಳನ್ನು ಕುಡಿಯುತ್ತಿದ್ದ, ತಿಲಕರು ಅವನ ಔಷಧಿಯ ಸೀಸೆಗಳನ್ನೆಲ್ಲಾ ಒಡೆದುಹಾಕಿ, ಔಷಧವನ್ನೆಲ್ಲಾ ಚೆಲ್ಲಿ ಅವನನ್ನು ಆಟದ ಮೈದಾನಕ್ಕೆ ಎಳೆದೊಯ್ದರು. ದೇಹಕ್ಕೆ ಶಕ್ತಿ ಬರಬೇಕಾದರೆ ಆರೋಗ್ಯದ ನಿಯಮಗಳನ್ನು ಅನುಸರಿಸಬೇಕು. ದೈಹಿಕ ಶ್ರಮವನ್ನು ವಹಿಸಬೇಕು ಎಂಬುದನ್ನು ಅವನಿಗೆ ಮನದಟ್ಟು ಮಾಡಿಕೊಟ್ಟರು. ತಿಲಕರು ಹೊಗೆಸೊಪ್ಪನ್ನು ಸೇದುವುದಾಗಲಿ, ಅಗಿಯುವುದಾಗಲಿ ಎಂದೂ ಅಭ್ಯಾಸ ಮಾಡಲಿಲ್ಲ. ಅವರ ಜೀವನಾದ್ಯಂತವೂ ಅವರು ಮದ್ಯಪಾನ ವಿರೋಧಿಗಳಾಗಿದ್ದರೆಂಬುದನ್ನು ಹೇಳಬೇಕಾಗಿಯೇ ಇಲ್ಲ. ಆದರೆ ಅಡಿಕೆ ಪುಡಿಯನ್ನು ಅಗಿಯುವುದು ಅವರಲ್ಲಿ ಚಿಕ್ಕಂದಿನಿಂದ ಬಂದ ಅಭ್ಯಾಸ.
ಮುಂದುವರೆಯುತ್ತದೆ…