ಕೆಲವು ಮಕ್ಕಳಿಗೆ ಸಾಮಾನ್ಯವಾಗಿ ಬಹುಬೇಗ ಶೀತ, ನೆಗಡಿ, ಕೆಮ್ಮು ಆಗುತ್ತಿರುತ್ತದೆ. ತಿಂಗಳಿಗೆ ಒಮ್ಮೆಯಾದರೂ ವೈದ್ಯರನ್ನು ಹತ್ತಿರ ಹೋಗುವ ಪರಿಸ್ಥಿತಿ ಎದುರಾಗುತ್ತದೆ ಎಂದು ಚಿಕ್ಕ ಮಕ್ಕಳ ಪಾಲಕರು ಬೇಸರ ಪಟ್ಟುಕೊಳ್ಳುವುದನ್ನು ನಾವು ಕೇಳುತ್ತಿರತ್ತೇವೆ. ಕೆಲವೊಮ್ಮೆ 2-3 ವರ್ಷಗಳ ಬಹಳಷ್ಟು ಮಕ್ಕಳಿಗೆ ಹೊರಗಿನ ತಿಂಡಿಗಳನ್ನು ತಿಂದಾಕ್ಷಣ ಗಂಟಲಿನಲ್ಲಿ ಸಮಸ್ಯೆ ಉಂಟಾಗುವುದನ್ನು ನೋಡಬಹುದು.
ಇದಕ್ಕೆ ಪ್ರಮುಖ ಕಾರಣ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು ಹಾಗೂ ಇಂದಿನ ವಾತಾವರಣವೇ ಕಾರಣ ಎನ್ನಬಹುದು. ಪದೇ ಪದೆ ನೆಗಡಿ, ಕೆಮ್ಮು ಉಂಟಾಗುವ ಮಕ್ಕಳಿಗೆ ಮನೆಯಲ್ಲೇ ಕೆಲವು ಸರಳ ಪದಾರ್ಥಗಳನ್ನು ನೀಡುವುದರ ಮೂಲಕ ಇದನ್ನು ಪರಿಹರಿಸಬಹುದು.
ಭಾರತೀಯರು ಅನಾದಿ ಕಾಲದಿಂದಲೂ ಈ ತರ ಮನೆ ಮದ್ದುಗಳನ್ನು ಬಳಕೆ ಮಾಡುತ್ತಿದ್ದಾರೆ. ಇಂದಿನ ಹೊಸ ಅಮ್ಮಂದಿರೂ ಸಹ ಇವುಗಳ ಬಳಕೆ ಅರಿತುಕೊಂಡರೆ ತಮ್ಮ ಪುಟಾಣಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅನುಕೂಲವಾಗುತ್ತದೆ.
ಒಂದು ಚಮಚ ಜೇನುತುಪ್ಪ ಹಾಗೂ ಕೆಲವು ಹನಿ ಶುಂಠಿ ರಸ ಮತ್ತು ತುಳಸಿ ಎಲೆಗಳ ಹನಿಯನ್ನು ಮಿಶ್ರಣ ಮಾಡಿ ದಿನವೂ ಕುಡಿಸಬಹುದು.
ದೇಸಿ ಹಸುವಿನ ಒಂದು ಚಮಚ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ 2-3 ಲವಂಗ ಹಾಕಬೇಕು. ಬಿಸಿ ತಣಿದ ಬಳಿಕ ನೀಡಬೇಕು. ಇದನ್ನು ದಿನವೂ ಮಲಗುವ ಮುನ್ನ ನೀಡಬೇಕು.
ಕೆಲವು ಓಮ ಕಾಳುಗಳನ್ನು ಫ್ರೈ ಮಾಡಿ, 3-4 ಬೆಳ್ಳುಳ್ಳಿ ಎಸಳುಗಳನ್ನು ಬಿಸಿ ಮಾಡಿ. ಅದನ್ನು ಸ್ವಚ್ಛವಾದ ಹತ್ತಿ ಬಟ್ಟೆಯಲ್ಲಿ ಸುತ್ತಿ ಮಗುವಿನ ಎದೆಯ ಮೇಲೆ ಇಡಿ.
ಜೇನುತುಪ್ಪ 1 ಚಮಚ, ಲಿಂಬೆ ರಸ 1 ಚಮಚವನ್ನು ಸ್ವಲ್ಪ ಬಿಸಿಯಾಗಿಸಿ ಮಕ್ಕಳಿಗೆ ನೀಡಬೇಕು. ಜೇನನ್ನು ಬಿಸಿ ಮಾಡಬಾರದು.
ಒಂದೆರಡು ಹನಿ ಶುಂಠಿ ರಸವನ್ನು ದಿನವೂ ರಾತ್ರಿ ನೀಡಿ. ತೀವ್ರ ಕೆಮ್ಮು ಇರುವಾಗ ಜೇನುತುಪ್ಪ ಮತ್ತು ಪೈನಾಪಲ್ ಸೇರಿಸಿ ನೀಡಿದರೆ ಸಹಕಾರಿಯಾಗುತ್ತದೆ.
ಬಿಸಿನೀರಿನ ಆವಿ ತೆಗೆದುಕೊಳ್ಳುವುದು ಪರಿಣಾಮಕಾರಿ. ಸಾದಾ ನೀರಿನ ಆವಿ ತೆಗೆದುಕೊಳ್ಳಬೇಕು. ಕೆಲವೊಮ್ಮೆ ತೀವ್ರವಾಗಿ ಮೂಗು ಕಟ್ಟಿದ್ದರೆ ನೀಲಗಿರಿ ತೈಲದ ಒಂದೆರಡು ಹನಿ ಸೇರಿಸಬಹುದು. ಇದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ.
ಹವಾಮಾನ ಬದಲಾಗುತ್ತಿರುವ ಸಮಯದಲ್ಲಿ ಮಕ್ಕಳ ಪಾದಗಳನ್ನು ಬೆಚ್ಚಗಿರಿಸಬೇಕು. ಶೀತವಾದಾಗ ವಿಕ್ಸ್ ಹಾಕಿ ಉಜ್ಜಿ ಪಾದಗಳಿಗೆ ಸಾಕ್ಸ್ ಹಾಕಿಡಿ.
ಸಾಸಿವೆ ಎಣ್ಣೆಗೆ 3-4 ಅರೆದ ಬೆಳ್ಳುಳ್ಳಿ, ಲವಂಗ ಹುರಿದು ಸೇರಿಸಿ. ಈ ತೈಲದಿಂದ ಎದೆ, ಬೆನ್ನು ಭಾಗಕ್ಕೆ ತಿಕ್ಕಿ ಮಲಗಿಸಿ ಉತ್ತಮ.
ತುಳಸಿ ಎಲೆ ರಸವನ್ನು 1 ಚಮಚ ಜೇನುತುಪ್ಪದೊಂದಿಗೆ ಬೆರೆಸಿ, ಶುಂಠಿ ರಸ ಸೇರಿಸಿ ದಿನವೂ ಬೆಳಗ್ಗೆ ಖಾಲಿ ಹೊಟ್ಟೆಗೆ ಕೊಡಬೇಕು.
ಈ ಮೇಲಿನ ಪರಿಹಾರಗಳಲ್ಲಿ ಯಾವುದಾದರೂ ಒಂದನ್ನು ಮಾತ್ರವೇ ನೀಡಿದರೆ ಸಾಕು. ಒಂದಕ್ಕಿಂತ ಹೆಚ್ಚಾಗಿ ಅನುಸರಿಸಿದರೆ ದೇಹ ಉಷ್ಣವಾಗಿ ಸಮಸ್ಯೆಯಾಗಬಹುದು. ಹಾಗೆಯೇ, ಸಮಸ್ಯೆ ತೀವ್ರವಾಗಿದ್ದಾಗ ವೈದ್ಯರನ್ನು ಭೇಟಿಯಾಗುವುದು ಸಹ ಅಗತ್ಯವಾಗಿದೆ.