ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಕಳೆದ ರಾತ್ರಿ (ಶುಕ್ರವಾರ) ಅಗ್ನಿ ಅವಘಡ ಸಂಭವಿಸಿ ಇಬ್ಬರು ಮಹಿಳಾ ಉದ್ಯೋಗಿಗಳೂ ಸೇರಿದಂತೆ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
ಈ ದುರಂತ ಇಡೀ ಬಿಬಿಎಂಪಿ ಕಚೇರಿ ಸಿಬ್ಬಂದಿಯನ್ನೇ ಕೆಲಕಾಲ ನಡುಗಿಸಿಬಿಟ್ಟಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತ ಆಗುವುದು ತಪ್ಪಿದೆ.
ದುರ್ಘಟನೆಯಲ್ಲಿ ಗಾಯಗೊಂಡಿರುವ ಪ್ರಯೋಗಾಲಯದ ಮುಖ್ಯ ಎಂಜಿನಿಯರ್ ಶಿವಕುಮಾರ್, ಕಾರ್ಯಪಾಲಕ ಎಂಜಿನಿಯರ್ಗಳಾದ ಕಿರಣ್, ಸಂತೋಷ್ಕುಮಾರ್, ವಿಜಯಮಾಲ, ಶ್ರೀಧರ್, ಎಫ್ಡಿಸಿ ಸಿರಾಜ್, ಆಪರೇಟರ್ ಜ್ಯೋತಿ, ಗಣಕಯಂತ್ರ ನಿರ್ವಾಹಕ ಮನೋಜ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಶ್ರೀನಿವಾಸ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲರಿಗೂ ಕೈ, ಕಾಲು ಹಾಗೂ ಮುಖ ಸುಟ್ಟು ಗಾಯಗಳಾಗಿ ನೋವಿನಿಂದ ಬಳಲುತ್ತಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಡಾಂಬರೀಕರಣಕ್ಕೆ ಬಳಸಿದ್ದ ಬಿಟಿಮಿನ್ ಮಿಶ್ರಣ ಕಾರಣ:
ರಸ್ತೆ ಡಾಂಬರೀಕರಣಕ್ಕೆ ಬಳಸಿದ್ದ ಬಿಟುಮಿನ್ ಮಿಶ್ರಣದ ಗುಣಮಟ್ಟ ಪರೀಕ್ಷಿಸುವ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡು ಅನಾಹುತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ತನಿಖೆ ಬಳಿಕ ಅಗ್ನಿ ಅವಘಡಕ್ಕೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಳಗಾವಿಯಿಂದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಬಂದು, ಆಸ್ಪತ್ರೆಯ ಸುಟ್ಟ ಗಾಯಗಳ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೇಂದ್ರ ಕಚೇರಿಯಲ್ಲಿ ನಡೆದ ಅಗ್ನಿ ಅವಗಢದ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿವರಣೆ ನೀಡುತ್ತಾ, ಬೆಂಕಿ ಹೊತ್ತಿಕೊಂಡಾಗ ಅಲ್ಲಿ ಸಿಬ್ಬಂದಿ ವರ್ಗದ ಇಬ್ಬರು ಸ್ಥಳದಲ್ಲಿದ್ದರೂ ಲಭ್ಯವಿದ್ದ ಫೈರ್ ಎಕ್ಸ್ ಟಿಂಗ್ವಿಷರ್ ನೆರವಿನಿಂದ ನಂದಿಸುವ ಪ್ರಯತ್ನ ಮಾಡದೆ ಅಲ್ಲಿಂದ ಓಡಿ ಹೋಗಿದ್ದಾರೆ, ಪೊಲೀಸರು ಅವರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಕೂರಿಸಿದ್ದಾರೆ ಎಂದು ಹೇಳಿದರು.
ಅಗ್ನಿ ಆಕಸ್ಮಿಕದ ಘಟನೆಯನ್ನು ಮೂರು ಆಯಾಮಗಳಿಂದ ತನಿಖೆ ನಡೆಸಲಾಗುವುದು, ಒಂದು ಇಲಾಖಾ ತನಿಖೆ, ಎರಡನೇಯದ್ದು ಪೊಲೀಸ್ ತನಿಖೆ ಮತ್ತು ಎಲೆಕ್ಟ್ರಿಕಲ್ ಇನ್ ಸ್ಪೆಕ್ಟೋರೇಟ್ ಅಂತ ಒಂದು ವಿಭಾಗವಿದ್ದು, ಅದರ ಅಧಿಕಾರಿಗಳು ಸಹ ತನಿಖೆ ನಡೆಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿವರಣೆ ನೀಡಿದ್ದಾರೆ.