ಬ್ರಿಟಿಷರ ಕಾಲದ ಕಾನೂನುಗಳಾದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳನ್ನು ಬದಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಲೋಕಸಭೆಯಲ್ಲಿ ಮಸೂದೆಗಳನ್ನು ಮಂಡಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅಮಿತ್ ಶಾ, 1860 ರಿಂದ 2023 ರವರೆಗೆ, ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಬ್ರಿಟಿಷರು ಮಾಡಿದ ಕಾನೂನಿನಂತೆ ಕಾರ್ಯನಿರ್ವಹಿಸಿತು. ಈ ಹಿನ್ನೆಲೆ ಈ 3 ಕಾನೂನುಗಳನ್ನು ಬದಲಾಯಿಸಲಾಗುವುದು ಮತ್ತು ದೇಶದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯಾಗಲಿದೆ. ದೇಶದಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
ಭಾರತೀಯ ನ್ಯಾಯ ಸಂಹಿತಾ-2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ-2023, ಮತ್ತು ಭಾರತೀಯ ಸಾಕ್ಷಿ ಮಸೂದೆ-2023 ಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಕಳುಹಿಸಲಾಗುವುದು ಎಂದು ಅಮಿತ್ ಶಾ ಹೇಳಿದರು.
ಸ್ವಾತಂತ್ರ್ಯ ಪೂರ್ವ 1860 ರಲ್ಲಿ ಬ್ರಿಟಿಷರು ರೂಪಿಸಿದ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ.) 160 ವರ್ಷಗಳಿಗೂ ಹೆಚ್ಚು ಕಾಲ ದೇಶದ ಅಪರಾಧ ನ್ಯಾಯ ವ್ಯವಸ್ಥೆಯ ಮೂಲವಾಗಿದೆ. ಇದನ್ನು ಭಾರತೀಯ ನ್ಯಾಯ ಸಂಹಿತೆ-2023 ರಿಂದ ಬದಲಾಯಿಸಲಾಗುತ್ತದೆ.
1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿ.ಆರ್.ಪಿ.ಸಿ.) ಅನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ರಿಂದ ಬದಲಾಯಿಸಲಾಗುತ್ತದೆ.
1872 ರ ಇಂಡಿಯನ್ ಎವಿಡೆನ್ಸ್ ಆಕ್ಟ್ ನ್ನು ಭಾರತೀಯ ಸಾಕ್ಷಿ ಮಸೂದೆ-2023 ರಿಂದ ಬದಲಾಯಿಸಲಾಗುತ್ತದೆ.
ವಿಯೋಜನೆ, ಸಶಸ್ತ್ರ ದಂಗೆ, ವಿಧ್ವಂಸಕ ಚಟುವಟಿಕೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು ಅಥವಾ ಸಾರ್ವಭೌಮತ್ವ ಅಥವಾ ಭಾರತದ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕಾರ್ಯಗಳ ಮೇಲೆ ಹೊಸ ಅಪರಾಧವನ್ನು ಪರಿಷ್ಕೃತ ಕಾನೂನುಗಳಲ್ಲಿ ಸೇರಿಸಲಾಗಿದೆ. ಯಾರೇ ಆಗಲಿ ಉದ್ದೇಶಪೂರ್ವಕ ಅಥವಾ ಗೊತ್ತಿದ್ದು ಪದಗಳಿಂದ, ಮಾತನಾಡುವ ಅಥವಾ ಬರೆಯುವ ಮೂಲಕ, ಅಥವಾ ಚಿಹ್ನೆಗಳ ಮೂಲಕ, ಅಥವಾ ಕಾಣಿಸುವಂಕತೆ, ಅಥವಾ ಎಲೆಕ್ಟ್ರಾನಿಕ್ ಸಂವಹನದಿಂದ ಅಥವಾ ಹಣಕಾಸಿನ ವಿಧಾನಗಳ ಮೂಲಕ, ಅಥವಾ ಇತರ ರೀತಿಯಲ್ಲಿ, ಪ್ರಚೋದಿಸುವ ಅಥವಾ ಪ್ರಯತ್ನಿಸುವ, ಪ್ರತ್ಯೇಕತೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳು, ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಉತ್ತೇಜಿಸುವುದು ಅಥವಾ ಭಾರತದ ಸಾರ್ವಭೌಮತೆ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡಿದೆರೆ ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಮಾಡಿದರೆ ಅವರಿಗೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ದಂಡಕ್ಕೆ ಗುರಿಯಾಗಬಹುದು ಎಂದು ಈ ಕಾನೂನು ಹೇಳುತ್ತದೆ.
ಗುಂಪು ಹತ್ಯೆ ಪ್ರಕರಣಗಳಲ್ಲಿ ಮರಣದಂಡನೆಯನ್ನು ಕೇಂದ್ರವು ಪರಿಚಯಿಸಲಿದೆ. ಇತರ ಪ್ರಸ್ತಾವಿತ ಶಿಕ್ಷೆಗಳಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆ, ಮತ್ತು ಅಪ್ರಾಪ್ತ ವಯಸ್ಸಿನ ಅತ್ಯಾಚಾರಕ್ಕಾಗಿ ಮರಣದಂಡನೆ ವಿಧಿಸಲಾಗುವುದು. ಹೊಸ ಮೂರು ಕಾನೂನುಗಳು ಭಾರತೀಯ ಪ್ರಜೆಯ ಹಕ್ಕುಗಳು ರಕ್ಷಿಸುವ ಉದ್ದೇಶ ಹೊಂದಿರುತ್ತದೆ. ಈ ತಿದ್ದುಪಡಿ ಮಸೂದೆ ಉದ್ದೇಶ ಶಿಕ್ಷಿಸುವುದಲ್ಲ, ಅದು ನ್ಯಾಯವನ್ನು ಒದಗಿಸುವುದು. ಅಪರಾಧ ಮಾಡುವ ಭಾವನೆ ತಡೆಯುವ ಉದ್ದೇಶದಿಂದ ಶಿಕ್ಷೆ ನೀಡಲಾಗುವುದು ಎಂದು ಅಮಿತ್ ಶಾ ಲೋಕಸಭೆಯಲ್ಲಿ ಹೇಳಿದ್ದಾರೆ.