ಬಹುಭಾಷಾ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಹಲವು ವರ್ಷಗಳ ಹಿಂದಿನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ಎಗ್ಮೋರ್ ನ್ಯಾಯಾಲಯ ನಟಿ ಜಯಪ್ರದಾಗೆ ಆರು ತಿಂಗಳ ಕಾಲ ಜೈಲು ಶಿಕ್ಷೆ ಜೊತೆಗೆ 5,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ.
ಜಯಪ್ರದಾ ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿ ನಟಿಸಿರೋ ಜನಪ್ರಿಯ ನಟಿ. ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ, ಬೆಂಗಾಳಿ, ಮರಾಠಿ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಹುಲಿಯ ಹಾಲಿನ ಮೇವು’, ‘ಕವಿರತ್ನ ಕಾಳಿದಾಸ’, ‘ಶಬ್ಧವೇದಿ’ ಹಾಗೂ ದರ್ಶನ್ ಅಭಿನಯದ ‘ ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ’ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದರು. ದಕ್ಷಿಣ ಭಾರತದ ಸಿನಿಮಾಗಳ ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿದ್ದರು.
ಅಲ್ಲದೆ ರಾಜಕೀಯದಲ್ಲೂ ಸಕ್ರಿಯರಾಗಿರುವ ಇವರಿಗೆ ಸಂಕಷ್ಟ ಎದುರಾಗಿದೆ. ನ್ಯಾಯಾಲಯದ ಪ್ರಕರಣದಲ್ಲಿ ಜಯಪ್ರದಾಗೆ ಸೋಲು ಎದುರಾಗಿದೆ.
ನಟಿ ಜಯಪ್ರದಾ ಚೆನ್ನೈನಲ್ಲಿ ಎರಡು ಥಿಯೇಟರ್ಗಳನ್ನು ನಡೆಸುತ್ತಿದ್ದರು. ಈ ಎರಡೂ ಚಿತ್ರಮಂದಿರಗಳ ಮೇಲೆ ಈಗಾಗಲೇ ಕೇಸ್ ದಾಖಲಾಗಿದೆ. ಅಲ್ಲದೆ ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಜಪ್ತಿ ಮಾಡಲಾಗಿದೆ. ನಟಿ ಜಯಪ್ರದಾ ಮತ್ತು ಇನ್ನು ಇಬ್ಬರು ಚಿತ್ರಮಂದಿರ ಮಾಲೀಕರು ಹಾಗೂ ಅವರ ವ್ಯಾಪಾರ ಸಹಚರರಾದ ರಾಮ್ ಕುಮಾರ್ ಮತ್ತು ರಾಜಾ ಬಾಬು ವಿರುದ್ಧ ಸರ್ಕಾರದ ಲೇಬರ್ ಇನ್ಶುರೆನ್ಸ್ ಕಾರ್ಪೋರೆಷನ್ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿತ್ತು. ಥಿಯೇಟರ್ನ ಮಾಜಿ ಸಿಬ್ಬಂದಿ ಜಯಪ್ರದಾ ವಿರುದ್ಧ ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ಸಂಬಳದಿಂದ ಕಡಿತಗೊಳಿಸಲಾದ ನೌಕರರ ರಾಜ್ಯ ವಿಮೆ (ಇಎಸ್ಐ) ಕಡಿತಗಳನ್ನು ಪೂರೈಸದ ಆರೋಪಗಳನ್ನು ಎತ್ತಿದ್ದರು. ಈ ಸಂಬಂಧ ಜಯಪ್ರದಾಗೆ 6 ತಿಂಗಳ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡವನ್ನು ಕೋರ್ಟ್ ವಿಧಿಸಿದೆ.
ವರದಿಯ ಪ್ರಕಾರ, ಜಯಪ್ರದಾ ಅವರು ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಥಿಯೇಟರ್ ಸಿಬ್ಬಂದಿಗೆ ನೀಡಬೇಕಾದ ಬಾಕಿಯನ್ನು ಪಾವತಿಸಲು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನು ವಜಾಗೊಳಿಸುವಂತೆ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು, ಆದರೆ ಅವರ ಮನವಿಯನ್ನು ತಿರಸ್ಕರಿಸಲಾಯಿತು. ನಿಗದಿತ ದಂಡದೊಂದಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸುವ ತನ್ನ ನಿರ್ಧಾರವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಸದ್ಯ ಜೈಲು ಶಿಕ್ಷೆಯಿಂದ ಜಯಪ್ರದಾ ಹೇಗೆ ಪಾರಾಗುತ್ತಾರೆ? ಅವರ ಮುಂದಿನ ನಡೆಯೇನು? ಅನ್ನೋದು ಸದ್ಯಕ್ಕೆ ಕುತೂಹಲಕಾರಿಯಾಗಿದೆ.