ಕೊಚ್ಚಿ: ಶಂಕಿತ ಆರೋಪಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಕರ್ನಾಟಕದ ಓರ್ವ ಪೋಲೀಸ್ ಇನ್ಸ್ಪೆಕ್ಟರ್ ಮತ್ತು ಮೂವರು ಪೊಲೀಸ್ ಸಿಬ್ಬಂದಿಯನ್ನು ಕೇರಳದ ಕಲಮಸ್ಸೆರಿ ಪೊಲೀಸರು ಷರತ್ತಿನ ಮೇರೆಗೆ ಬುಧವಾರ ಸಂಜೆ ಬಿಡುಗಡೆ ಮಾಡಿದ್ದಾರೆ.
ಕ್ರಿಪ್ಟೋ ಕರೆನ್ಸಿ ಪ್ರಕರಣದ ತನಿಖೆಗೆ ಕೇರಳಕ್ಕೆ ಬಂದಿದ್ದ ಆರೋಪಿ ಪೊಲೀಸ್ ಸಿಬ್ಬಂದಿ, ಪ್ರಕರಣದಲ್ಲಿ ಇಬ್ಬರು ಶಂಕಿತರನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕೇರಳ ಪೋಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್ಐಆರ್) ಪ್ರಕಾರ, ಬೆಂಗಳೂರಿನ ವೈಟ್ ಫೀಲ್ಡ್ ನ ಇನ್ಸ್ ಪೆಕ್ಟರ್ ಮತ್ತು ಮೂವರು ಸದಸ್ಯರ ಪೊಲೀಸ್ ತಂಡವು ದೂರುದಾರ ಅಖಿಲ್ ಅಲ್ಬಿ ಮತ್ತು ಆತನ ಸ್ನೇಹಿತ ನಿಖಿಲ್ ಅವರನ್ನು ಆಗಸ್ಟ್ 1 ಮಂಗಳವಾರದಂದು ಒತ್ತೆಯಾಳಾಗಿ ಇರಿಸಿಕೊಂಡು, ಸಹ ಆರೋಪಿಗಳೆಂದು ಹೆಸರಿಸುವುದಾಗಿ ಬೆದರಿಸಿ ಅವರಿಂದ ಸುಮಾರು 4 ಲಕ್ಷ ರೂ. ಸುಲಿಗೆ ಮಾಡಿದ್ದರು. ಆಗ ಓರ್ವನ ಪ್ರೇಯಸಿಯು ಕೊಚ್ಚಿ ಪೋಲೀಸರಿಗೆ ಕರೆ ಮಾಡಿ ದೂರು ನೀಡಿದ್ದಳು. ಇದರಿಂದಾಗಿ ಪ್ರಕರಣ ಬಯಲಿಗೆ ಬಂದಿತ್ತು.
ಆರೋಪಿಗಳನ್ನು ವೈಟ್ಫೀಲ್ಡ್ ಸಿಇಎನ್ (ಸೈಬರ್, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ) ಪೊಲೀಸ್ ಇನ್ಸ್ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ಟೆಬಲ್ಗಳಾದ ವಿಜಯಕುಮಾರ್ ಮತ್ತು ಶಿವಣ್ಣ ಮತ್ತು ಪೊಲೀಸ್ ಪೇದೆ ಸಂದೇಶ್ ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 342 (ಅಕ್ರಮ ಬಂಧನ ), 384 (ಸುಲಿಗೆ ), 385 (ಸುಲಿಗೆ ಮಾಡುವ ಸಲುವಾಗಿ ಭಯದಲ್ಲಿ ವ್ಯಕ್ತಿಯನ್ನು ಇರಿಸುವುದು), ಮತ್ತು 34 (ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಕಲಮಸ್ಸೇರಿ ಪೋಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಕರ್ನಾಟಕ ಪೊಲೀಸರು ನೀಡಿದ ಹೇಳಿಕೆ ಪ್ರಕಾರ, ಜೂನ್ 14 ರಂದು ವೈಟ್ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ತಂಡ ಕೇರಳಕ್ಕೆ ಪ್ರಯಾಣ ಬೆಳೆಸಿದೆ. ಆ ಪ್ರಕರಣದ ದೂರುದಾರ ಚಂದಕ ಶ್ರೀಕಾಂತ್ ಅವರಿಗೆ ಆರೋಪಿಗಳು ಕ್ರಿಪ್ಟೋ ಕರೆನ್ಸಿ ಮೂಲಕ 26 ಲಕ್ಷ ರೂಪಾಯಿ ವಂಚಿಸಿದ್ದರು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೋಲೀಸರು ತನಿಖೆ ನಡೆಸುತ್ತಿದ್ದರು.
ವೈಟ್ಫೀಲ್ಡ್ ಪೋಲೀಸ್ ತಂಡವು ಆಗಸ್ಟ್ 1 ರಂದು ಕೇರಳದ ವೆಂಗರಾದಿಂದ ನೌಶಾದ್ನನ್ನು ಬಂಧಿಸಿತು. ಅದರ ನಂತರ ಇತರ ಇಬ್ಬರು ಶಂಕಿತರಾದ ಎರ್ನಾಕುಲಂನ ಅಖಿಲ್ ಮತ್ತು ನಿಖಿಲ್ ಅವರನ್ನು ಸಹ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮೂವರು ಶಂಕಿತರನ್ನು ಬಂಧಿಸಿರುವ ಬಗ್ಗೆ ಅಧಿಕಾರಿಗಳು ಸ್ಥಳೀಯ ಪಲ್ಲುರುತಿ ಠಾಣೆಗೆ ಮಾಹಿತಿ ನೀಡಿದ್ದರು.
ಈ ಪ್ರಕರಣದಿಂದ ಆರೋಪಿಗಳ ಹೆಸರನ್ನು ಕೈಬಿಡಲು ಕರ್ನಾಟಕ ಪೊಲೀಸ್ ಸಿಬ್ಬಂದಿ 25 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ನಡೆದ ಮಾತುಕತೆಯಲ್ಲಿ 10 ಲಕ್ಷ ರೂ. ಹಣಕ್ಕೆ ಒಪ್ಪಿಕೊಳ್ಳಲಾಗಿತ್ತು. ಈ ಪೈಕಿ ಓರ್ವ ಆರೋಪಿಯಿಂದ 3 ಲಕ್ಷ ರೂ. ಮತ್ತು ಇನ್ನೊಬ್ಬ ಆರೋಪಿಯಿಂದ 1 ಲಕ್ಷ ರೂ. ಸೇರಿ 4 ಲಕ್ಷ ರೂ. ಹಣ ಪಡೆದ ಆರೋಪ ಪ್ರಕರಣ ಇದಾಗಿದೆ. ಈ ಹಣ ಪಡೆದ ಮೇಲೂ ಬುಧವಾರ ರಾತ್ರಿ ಓರ್ವ ಆರೋಪಿಯನ್ನು ಹಿಡಿದುಕೊಂಡು ಕರ್ನಾಟಕ ಪೊಲೀಸ್ ತಂಡ ರಾಜ್ಯಕ್ಕೆ ವಾಪಸಾಗುತ್ತಿತ್ತು.
ತಮಗೆ ದೊರೆತ ಮಾಹಿತಿಯ ಮೇರೆಗೆ ಬುಧವಾರ ಕೊಚ್ಚಿ ಉಪ ಪೊಲೀಸ್ ಆಯುಕ್ತ ಶಶಿಧರನ್ ಅವರು ಕಲಮಸ್ಸೆರಿ ಎಸ್ಎಚ್ಒಗೆ ಸುಲಿಗೆ ಮಾಡಿದ ಮಾಹಿತಿಯ ಆಧಾರದ ಮೇಲೆ ಕರ್ನಾಟಕ ತಂಡದ ಕಾರನ್ನು ತಡೆಹಿಡಿಯುವಂತೆ ಸೂಚಿಸಿದ್ದಾರೆ. ಕೇರಳ ಪೋಲೀಸರು ಇನ್ನೋವ ಕಾರನ್ನು ಪತ್ತೆ ಹಚ್ಚಿದಾಗ ಅದನ್ನು ರಸ್ತೆಬದಿಯಲ್ಲಿ ನಿಲ್ಲಿಸಿದ್ದು ಮತ್ತು ನಾಲ್ವರು ಪೋಲೀಸರು ಮತ್ತು ಮೂವರು ಶಂಕಿತ ಆರೋಪಿಗಳು ಅನುಮಾನಾಸ್ಪದ ರೀತಿಯಲ್ಲಿ ನಿಂತಿರುವುದನ್ನು ಗಮನಿಸಿದರು. ತಪಾಸಣೆ ನಡೆಸಿದಾಗ ಕಾರಿನಲ್ಲಿ 3,95,000 ರೂ.ಗಳು ಪತ್ತೆಯಾಗಿದ್ದು, ಇದಕ್ಕೆ ತೃಪ್ತಿಕರ ವಿವರಣೆ ನೀಡಲು ಬೆಂಗಳೂರಿನ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಇದೇ ವೇಳೆ ಪೋಲೀಸರು ಪ್ರಶ್ನಿಸಿದಾಗ ತಮಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅಖಿಲ್ ಕಲಮಸ್ಸೇರಿ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಪೊಲೀಸರು ಕರ್ನಾಟಕ ಪೊಲೀಸ್ ತಂಡವನ್ನು ವಶಕ್ಕೆ ಪಡೆದು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಕೊಚ್ಚಿ ಡಿಸಿಪಿ ಎಸ್ ಶಶಿಧರನ್ ಅವರೊಂದಿಗೆ ಪ್ರಕರಣದ ಪ್ರಕ್ರಿಯೆಗಳ ಕುರಿತು ಚರ್ಚಿಸಲು ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಗುರುವಾರ ಎರ್ನಾಕುಲಂಗೆ ಆಗಮಿಸಿ ಮಾತುಕತೆ ನಡೆಸಿದ ನಂತರ ಮುಂದಿನ ಆಗಸ್ಟ್ 16 ರಂದು ಕಲಮಸ್ಸೇರಿ ಪೋಲೀಸ್ ಠಾಣೆಗೆ ಬರಬೇಕೆಂಬ ಷರತ್ತಿನ ಮೇಲೆ ನಾಲ್ವರನ್ನೂ ಬಿಡುಗಡೆ ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಅವರು ಗರಿಷ್ಠ ಏಳು ವರ್ಷ ಶಿಕ್ಷೆ ಮೀರದ ಅಪರಾಧ ಪ್ರಕರಣಗಳಲ್ಲಿ ಮಾತ್ರ ತನಿಖಾ ಅಧಿಕಾರಿಗಳಿಗೆ ಬಂಧಿಸಲು ಅವಕಾಶವಿದೆ. ಹೀಗಾಗಿ ಸುಪ್ರೀಂ ಕೋರ್ಟ್ನ ಮಾರ್ಗಸೂಚಿಗಳನ್ನು ಅನುಸರಿಸಿ ಕೇರಳ ಪೊಲೀಸರು ಬಂಧಿಸುವುದು ಕಡ್ಡಾಯವಲ್ಲ ಎಂದು ನಿರ್ಧರಿಸಿ ಬಿಡುಗಡೆಗೊಳಿಸಲಾಗಿದೆ ಎಂದರು.
ಕರ್ನಾಟಕ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕೊಚ್ಚಿಯ ಇಬ್ಬರು ಯುವಕರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ ಎಂದು ತಿಳಿದು ಬಂದಿದೆ.