ಸಭೆ ಸಮಾರಂಭಗಳಲ್ಲಿ ಅತಿಥಿಗಳನ್ನು ಆದರಿಸಲು ಸಾವಿರಾರು ರೂಪಾಯಿಗಳನ್ನು ಹೂಗುಚ್ಛಗಳ ಖರೀದಿಗೆ ವ್ಯಯಿಸುತ್ತೇವೆ. ಕೌಟುಂಬಿಕ ಕಾರ್ಯಕ್ರಮಗಳಲ್ಲಿಯೂ ಸ್ನೇಹಿತರಿಗೆ ಸಂಬಂಧಿಕರಿಗೆ ಉಡುಗೊರೆ ಕೊಡಲು ಅನವಶ್ಯಕವಾಗಿ ಹಣ ಪೋಲು ಮಾಡುತ್ತೇವೆ. ಅದರ ಬದಲಾಗಿ ನೆನಪಿನಲ್ಲಿ ಉಳಿಯುವಂಥ, ಉಪಯುಕ್ತ ಮತ್ತು ಅರ್ಥಪೂರ್ಣ ಉಡುಗೊರೆಗಳನ್ನು ಕೊಡುವುದು ಬಹಳಷ್ಟು ಆಯಾಮಗಳಿಂದ ಸೂಕ್ತ ಎನ್ನಿಸುತ್ತದೆ. ಇಂತಹ ಒಂದು ಕ್ರಾಂತಿ ಒಂದು ಸೀರೆ ಮತ್ತು ಪುಸ್ತಕದ ನಡುವೆ ನಡೆದಿದೆ.
ಗುಳೇದಗುಡ್ಡ ಸೀರೆ ಯಾರಿಗೆ ಗೊತ್ತಿಲ್ಲ ಹೇಳಿ? ಇಳಕಲ್ ಸೀರೆ ಮತ್ತು ಗುಳೇದಗುಡ್ಡ ಖಣದ ಮೆರುಗು, ಜವಾರೀತನ ಮತ್ತು ಆಪ್ತತೆಗಾಗಿ ಹೆಣ್ಣುಮಕ್ಕಳು ಹಂಬಲಿಸುತ್ತಾರೆ. ಇನ್ನು ಕೆಲ ಗಂಡಸರು ತನ್ನ ಅಕ್ಕ ತಂಗಿಯನ್ನೋ, ಗೆಳತಿಯನ್ನೋ, ಅಮ್ಮನನ್ನೋ, ಹೆಂಡತಿಯನ್ನೋ ಅಥವಾ ಪ್ರೀತಿಪಾತ್ರರನ್ನೋ ಇಂಥದೊಂದು ಸೀರೆ, ರವಿಕೆಯಲ್ಲಿ ನೋಡಬೇಕು ಎಂದು ಆಶಿಸುತ್ತಾರೆ. ಬಹಳ ಹಿಂದಿನಿಂದಲೂ ತನ್ನದೇ ಆದ ವೈಶಿಷ್ಟ್ಯದಿಂದ ಪ್ರಸಿದ್ಧಿಗೆ ಬಂದಿದೆ ಗುಳೇದಗುಡ್ಡದ ಖಣ.
ಗುಳೇದಗುಡ್ಡದ ಸೀರೆಯನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿರುವ ಕುಟುಂಬಗಳ ಸಂಖ್ಯೆ ತುಂಬಾನೇ ಇದೆ. ನಮ್ಮ ಕರ್ನಾಟಕ ಅನನ್ಯ ಪರಂಪರೆ ಗುಳೇದಗುಡ್ಡ ಸೀರೆಯ ಉದ್ಯವನ್ನು ಇನ್ನಷ್ಟು ಬೆಳೆಸುವ ಉದ್ದೇಶದಿಂದ ಬಾಗಲಕೋಟೆಯಲ್ಲಿ ಹೊಸ ಪ್ರಯತ್ನವೊಂದು ನಡೆಯುತ್ತಿದೆ. ಜೊತೆಗೆ ಕೋವಿಡ್ನಿಂದ ಕಷ್ಟದಲ್ಲಿದ್ದ ಪುಸ್ತಕ ಮುದ್ರಣ, ನೇಕಾರರ ಜೀವನಕ್ಕೂ ದಾರಿ ಸಿಗುತ್ತಿದೆ. ಹಾಗಿದ್ದರೆ ಗುಳೇದಗುಡ್ಡದ ಖಣವನ್ನು ಏನು ಮಾಡಲಾಗುತ್ತಿದೆ? ಹೇಗೆ ಗುಳೇದಗುಡ್ಡ ಸೀರೆಯ ಉದ್ಯಮವನ್ನು ಬೆಳೆಸಲಾಗುತ್ತಿದೆ?
ಅದು ಕೋವಿಡ್ ಕಾಲ. ಪುಸ್ತಕ ಮುದ್ರಣಾಲಯಗಳಿಗೂ ಸಂಕಷ್ಟದ ಸಮಯ. ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬೇಕು ಎಂದೆನಿಸುವಷ್ಟು ದುಸ್ಥಿತಿ. ಆದರೆ ಈ ಸಮಸ್ಯೆಯಿಂದ ಪಾರಾಗಲು ಬೆಂಗಳೂರಿನ ಅಕ್ಷರ ಪ್ರಿಂಟರ್ಸ್ ಮತ್ತು ಹೆಗ್ಗೋಡಿನ ಚರಕ ಸಂಸ್ಥೆ ಹೊಸ ಯೋಚನೆ ಮಾಡಿತು. ನೋಟ್ಬುಕ್ಗಳನ್ನು ರೇಷ್ಮೆ-ಖಾದಿ-ಕೈಮಗ್ಗದ ಬಟ್ಟೆಯಿಂದ ಕೈಯಿಂದಲೇ ತಯಾರಿಸುವ ಯೋಜನೆಗೆ ಕೈಹಾಕಿತು. ಇದು ಮುದ್ರಣಾಲಯದ ಎಲ್ಲ ಉದ್ಯೋಗಿಗಳಿಗೂ ಕೆಲಸ ನೀಡಿತಲ್ಲದೇ ಜೀವನವನ್ನೂ ಆರ್ಥಿಕವಾಗಿ ಕುಗ್ಗಿಹೋಗುವ ಅಪಾಯದಿಂದ ಹೊರತಂದಿತು.
ಗುಳೇದಗುಡ್ಡದ ಖಣದ ಸೀರೆ ನಮ್ಮ ಪರಂಪರೆಯನ್ನು ಬಿಂಬಿಸುವ ಸಾಂಪ್ರದಾಯಿಕ ಬಟ್ಟೆ. ಸಾಂಪ್ರದಾಯಿಕವಾಗಿ ಕುಪ್ಪಸ ಹೊಲಿಯಲು ಬಳಸುವ ಬಟ್ಟೆಯನ್ನು ನೋಟ್ಬುಕ್ಗಳ ಕವರ್ ಪೇಜ್ ಆಗಿ ಬಳಸುವ ವಿಶೇಷ ಯೋಜನೆ ರೂಪುಗೊಂಡಿತು.ಹಿರಿಯ ಅಧಿಕಾರಿಗಳು, ಸೆಲೆಬ್ರಿಟಿಗಳಿಂದ ಬೆಂಬಲರೇಷ್ಮೆ ನೋಟ್ಬುಕ್ ಕವರ್ ಆಲೋಚನೆಯು ಸಾರ್ವಜನಿಕರ ವ್ಯಾಪಕ ವರ್ಗದಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ. ಸೆಲೆಬ್ರಿಟಿಗಳಿಂದ ಹಿರಿಯ ಮಹಿಳಾ ಅಧಿಕಾರಿಗಳು ಮತ್ತು ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿನ ಅಧಿಕಾರಿಗಳು ಸಹ ಅವರ ಕೆಲಸಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ 400 ವರ್ಷಗಳಿಂದ ಗುಳೇದಗುಡ್ಡ ಬಟ್ಟೆ ನೇಯ್ಗೆಯಲ್ಲಿ ತೊಡಗಿಸಿಕೊಂಡಿರುವ ಗುಳೇದಗುಡ್ಡದ ನೇಕಾರರಿಗೆ ಉತ್ತೇಜನ ದೊರೆಯುತ್ತಿದೆ.
ಇಂತಹ ಕೆಲಸಕ್ಕೆ ಇನ್ನಷ್ಟು ಹುಮ್ಮಸ್ಸು ಹುಟ್ಟಿದ್ದು ದೀಪಿಕಾ ಬಾಜಪೇಯಿ ಅವರ ಟ್ವೀಟ್ ನಿಂದ ಎಂದರೆ ತಪ್ಪಾಗಲಾರದು.
ಗದುಗಿನಲ್ಲಿರುವ ಐಎಫ್ಎಸ್ ಅಧಿಕಾರಿ ದೀಪಿಕಾ ಬಾಜಪೇಯಿ ಗುಳೇದಗುಡ್ಡ ಖಣಗಳ ಹೊದಿಕೆಯನ್ನು ಉಳ್ಳ ನೋಟ್ಬುಕ್/ಡೈರಿಗಳನ್ನು ಟ್ವೀಟ್ ಮಾಡಿದ್ದಾರೆ.
ಇದೀಗ ದೀಪಿಕಾ ಅವರ ಟ್ವೀಟ್ ಅನ್ನು ಸುಮಾರು 60,000 ಜನರು ನೋಡಿದ್ದಾರೆ. ನೂರಾರು ಜನರು ಈ ಖಣ ನೋಟ್ಬುಕ್/ಡೈರಿ ತಯಾರಕರನ್ನು ಸಂಪರ್ಕಿಸುವುದು ಹೇಗೆ ಎಂದು ಕೇಳಿದ್ದಾರೆ. ಕೆಲ ಪ್ರಜ್ಞಾವಂತರಾದರೂ ಈ ಉತ್ಪನ್ನಗಳಿಗೆ ಹೊಸ ಆಯಾಮದಲ್ಲಿ ಮಾರುಕಟ್ಟೆ ಸೃಷ್ಟಿಸುತ್ತಿದ್ದಾರೆ ಮತ್ತು ಮಾರಾಟಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ ಎನ್ನುವುದು ಒಂದೆಡೆ ಸಮಾಧಾನವೆನ್ನಿಸಿದರೂ ಇದು ನೇಕಾರಿಕೆಯ ಕುಟುಂಬಗಳಿಗೆ ನಿರೀಕ್ಷಿತ ಆದಾಯ ತರಬಲ್ಲುದೇ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತಿದೆ.