ಅಕ್ಕಮ್ಮಾ…,
ಏಳು ಗಂಟೆಗೆ ಬೆಳಗಿನ ಉಪಾಹಾರ ಮುಗಿಸಿ ಅಯೋಧ್ಯೆಗೆ ಹೊರಟೆವು. ನಡುವೆ ಒಂದು ಡಾಬಾದಲ್ಲಿ ಹೊಟ್ಟೆ ಖಾಲಿ ಮಾಡುವ ಹಾಗೂ ತುಂಬಿಸುವ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ದಾರಿಯುದ್ದಕ್ಕೂ ಮುಸ್ಲಿಂ ಹೆಸರುಗಳುಳ್ಳ ಊರುಗಳುಒಂದಾದರೂ ಹಳೆಯ ಹೆಸರುಗಳು ಕಾಣುತ್ತವೆಯೇ..ಎಂದು ಕಿಟಕಿಯಿಂದ ಕತ್ತು ಉದ್ದ ಮಾಡಿ ನೋಡಿದ್ದೇ ಬಂತು..ಊಹುಂ…ಪ್ರಯೋಜನವಾಗಿಲ್ಲ. ಊರುಗಳ ಹೆಸರುಗಳೆಲ್ಲಾ ಆ …ಬಾದ್,ಈ….ಬಾದ್ ಅಂತಾನೆ ಇತ್ತು. ನಾವು ಭಾರತದಲ್ಲಿದ್ದೇವೋ ಅಥವಾ ಪಾಕಿಸ್ತಾನ್,ಬಾಂಗ್ಲಾದಲ್ಲಿ ಇದ್ದೇವೋ ಎಂಬ ಭ್ರಮೆ ಹುಟ್ಟಿಸುತ್ತಿತ್ತು. ಅಲ್ಲಲ್ಲಿ ದೇವಸ್ಥಾನಗಳನ್ನು ಕಂಡು ಭಾರತದಲ್ಲಿಯೇ ಇದ್ದೇನೆ.. ಎಂದು ಸ್ವಲ್ಪ ಸಮಾಧಾನವಾಯಿತು.
ಮಧ್ಯಾಹ್ನ ಒಂದು ಗಂಟೆಗೆ ಅಯೋಧ್ಯೆಗೆ ತಲುಪಿದೆವು. ಅಲ್ಲಿ ಒಂದು ದೊಡ್ಡ ಛತ್ರವಿತ್ತು. ತುಂಬಾ ವಿಶಾಲವಾಗಿ,ಸ್ವಚ್ಛವಾಗಿಯೂ ಇತ್ತು. ಶೌಚಾಲಯ ವ್ಯವಸ್ಥೆಯೂ ಚೆನ್ನಾಗಿತ್ತು.ದೊಡ್ಡ ಅಂಗಳ,ಹುಲ್ಲುಹಾಸು ಎಲ್ಲವೂ ಇತ್ತು. ನೀರಿನ ವ್ಯವಸ್ಥೆಯೂ ಚೆನ್ನಾಗಿತ್ತು. ಅಯೋಧ್ಯೆಗೆ ಬರುವವರಲ್ಲಿ ಹೆಚ್ಚಿನವರು ಇಲ್ಲಿಯೇ ಉಳಿದುಕೊಳ್ಳಬಹುದಿತ್ತು. ದೊಡ್ಡದೊಡ್ಡ ಊಟದ ಹಾಲ್.ಗಳು ಇದ್ದವು. ಊಟದ ಹಾಲಲ್ಲಿ ಕುಳಿತುಕೊಳ್ಳಲು ಸಾಲಾಗಿ ಕಲ್ಲಿನ ಬೆಂಚುಗಳೂ ಇದ್ದವು. ಬಫೆಗೆ ಇಡುವಂತೆ ಅಡುಗೆ ಮಾಡಿದ ಪಾತ್ರೆಗಳನ್ನು ಇಟ್ಟು ಬಡಿಸಲು ಅನುಕೂಲವಾಗುವಂತೆ..ಸುಮಾರು ಹತ್ತು ಹನ್ನೆರಡು ಕಲ್ಲಿನ ಉದ್ದನೆಯ ಮೇಜುಗಳು ಇದ್ದವು. ನೆಲದ ಮೇಲೂ..ಸಾಲಾಗಿ ಅಥವಾ ದುಂಡಗೆ ಕೂತು ಊಟ ಮಾಡಬಹುದಿತ್ತು. ನಾವು ಕಾಶಿಯಿಂದ ಸಿದ್ಧ ಪಡಿಸಿ ಕೊಂಡು ಹೋದ ಅನ್ನ,ಸಾಂಬಾರು, ಚಪಾತಿ, ಪಲ್ಯ ಮುಂತಾದವುಗಳನ್ನು ಹಾಕಿಸಿಕೊಂಡು ಊಟ ಮುಗಿಸಿದೆವು.
ಊಟದ ಬಳಿಕ ಆಟೋದಲ್ಲಿ ರಾಮ ಜನ್ಮ ಭೂಮಿಯತ್ತ ಹೊರಟೆವು. ಇಲ್ಲೂ ಊರಿನೊಳಗೆ ಬಸ್ ಹೋಗುವುದಿಲ್ಲ. ಜನ್ಮಭೂಮಿಗಿಂತಲೂ ಮೊದಲೇ ಒಂದು ಕಿಮೀ. ಮೊದಲು ಆಟೋದಿಂದ ಇಳಿಸಿದರು. ಅಲ್ಲಿಂದ ನಡೆದುಕೊಂಡು ಹೋಗಬೇಕಿತ್ತು. ಅನಿವಾರ್ಯ ಅದವರಿಗೆ ಮತ್ತೆ ಸ್ವಲ್ಪ ದೂರ ಸೈಕಲ್ ರಿಕ್ಷಾದಲ್ಲಿ ಹೋಗಬಹುದಿತ್ತು. ನಾನು ಮತ್ತು ಅಜ್ಜ ಯಥಾಪ್ರಕಾರ ಸೈಕಲ್ ರಿಕ್ಷಾದಲ್ಲಿ ಹೋದರೆ ಉಳಿದವರು ನಡೆದುಕೊಂಡೇ ಬಂದರು. ಅಲ್ಲಿ ಒಂದು ಗೇಟ್ ವರೆಗೆ ಬಿಟ್ಟರೆ ಮತ್ತೆ ಸೆಕ್ಯೂರಿಟಿ ಪ್ರಾರಂಭ. ಮೊದಲು ಒಂದು ಸಣ್ಣ ಗೂಡು…ಗಂಡಸರಿಗೆ checking.. ಮತ್ತೆ ಇಪ್ಪತ್ತು ಹೆಜ್ಜೆ ಹೋದರೆ ಹೆಂಗಸರಿಗಾಗಿ ಒಂದು ಗೂಡು ತಪಾಸಣೆಗೆ.
ಅಜ್ಜ ಗಂಡಸರ ಸಾಲಿಗೆ ಹೀಗಿ ನಿಂತರೆ..ನಾನು ಹೆಂಗಸರ ಸಾಲು ಸೇರಲು ಹೋದೆ. ನಿನಗೆ ಗೊತ್ತುಂಟಲ್ಲಾ ..ಸೆಕ್ಯೂರಿಟಿ ಚೆಕ್ಕಿಂಗ್ ಅಂದರೆ…ದೆಹಲಿಯಲ್ಲಿ “ಅಕ್ಷರಧಾಮ”ಕ್ಕೆ ಹೋದಾಗ ನೋಡಿದ್ದಿಯಲ್ವಾ..ಹಾಗೆಯೇ ಬಿಗಿಯಾದ ಚೆಕ್ಕಿಂಗ್..
ಸಾಲಾಗಿ ಅಲ್ಲಲ್ಲಿ ಪೋಲಿಸ್ ರು ನಿಂತಿರುತ್ತಾರೆ. ನಮ್ಮ ಜೊತೆಯವರೆಲ್ಲಾ ಸಾಲಲ್ಲಿ ಸಾಲಾಗಿ ಹೋಗಲು ನನ್ನನ್ನು ಮಾತ್ರ ಸಾಲಿನಿಂದ ಇತ್ತ ನಿಲ್ಲಲು ಪೋಲಿಸ್ ನವರು ಆದೇಶಿಸಿದರು. ನನಗೆ ಯಾಕೆಂದು ಗೊತ್ತಾಗಲಿಲ್ಲ. ಇಲ್ಲಿ ಹೋಗುವಾಗ ಬ್ಯಾಗ್,ಕೈಚೀಲ,ನೀರಿನ ಬಾಟಲ್,ಕೊನೆಗೆ ಚಾಕ್ಲೇಟ್ ಕೂಡಾ ಇರಬಾರದು. ಅಂಗೈ ಅಗಲದ ಹಣದ ಪರ್ಸ್ ಇಟ್ಕೋಬಹುದು…ಅಷ್ಟೇ..
” ನನ್ನ ಹತ್ತಿರವೂ ಏನೂ ಇಲ್ಲವಲ್ಲ.. ಮತ್ಯಾಕೆ ನನ್ನನ್ನು ಅಡ್ಡಹಾಕಿದಿರಿ..ನಾನೂ ನನ್ನ ಸಂಗಡಿಗರ ಜೊತೆಯೇ ಚೆಕ್ಕಿಂಗ್ ಗೆ ಹೋಗ್ತೇನೆ ..”ಎಂದೆ. ಅದಕ್ಕೆ ಅವರು..ನಿಮ್ಮ ಕೈಯಲ್ಲಿ ವಾಕಿಂಗ್ ಸ್ಟಿಕ್ ಇದೆಯಲ್ಲಾ..ಅದನ್ನು ಒಯ್ಯುವ ಹಾಗಿಲ್ಲ. ಕೊಟ್ಟು ಹೋಗಿ ಎಂದರು..ನಾನು “ಸ್ಟಿಕ್ ಇಲ್ಲದಿದ್ದರೆ ನನಗೆ ನಡೆಯಲು ಆಗುವುದಿಲ್ಲ…”ಎಂದೆ. ಎಂದರು
“ಹಾಗಾದರೆ ಆ ಸ್ಟಿಕ್ ಕೊಡಿ ಅದನ್ನೂ ಪರಿಶೀಲಿಸಿ ತರುತ್ತೇವೆ ಅದುವರೆಗೂ ಇಲ್ಲೇ ನಿಂತಿರಿ..”ಎಂದರು.ಮೆಟಲ್ ಡಿಟೆಕ್ಟರ್ ಗಂಡಸರ ತಪಾಸಣಾ ಕೇಂದ್ರದ ಬಳಿ ಮಾತ್ರ ಇತ್ತು. ನಾನು ಹೇಳಿದೆ..”ನನಗೆ ಅಷ್ಟು ಹೊತ್ತು ಆಧಾರ ಇಲ್ಲದೆ ನಿಲ್ಲಲಾಗುವುದಿಲ್ಲ..ಇಲ್ಲೆಲ್ಲೂ ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲವಲ್ಲಾ ..” ಎಂದೆ. ಆ ಮೇಲೆ ಅವರವರೇ ಮಾತನಾಡಿಕೊಂಡು ಅಲ್ಲಿ ಪೋಲಿಸರಿಗೆಂದು ಇಟ್ಟ ಬೆಂಚಿನ ಮೂಲೆಯಲ್ಲಿ ನನಗೂ ಕುಳಿತುಕೊಳ್ಳಲು ಅವಕಾಶ ನೀಡಿದರು. ಅಷ್ಟು ಹೊತ್ತಿಗೆ ನಮ್ಮ ಸಂಗಡಿಗರೆಲ್ಲರ ತಪಾಸಣೆ ಮುಗಿದು ಹೋಗಿಯಾಗಿತ್ತು. ಅಜ್ಜ ಒಬ್ಬರು ನನ್ನನ್ನು ನೋಡಿ ಅಲ್ಲಿಗೆ ಬಂದರು. ಅಜ್ಜನಿಗೆ ಅಲ್ಲಿ ಬರಲು ಆಸ್ಪದ ನೀಡಲಿಲ್ಲ.. ಅದು ಹೆಂಗಸರದ್ದಲ್ಲವೇ..? ಮತ್ತೆ ನನ್ನ ಸ್ಟಿಕ್ ತೆಗೆದುಕೊಂಡು ಹೋದ ಪೋಲಿಸ್ ಅದನ್ನು ತಂದು ಕೊಟ್ಟ. “ಮುಗಿಯಿತಲ್ಲಾ..ಒಂದು ಕಿರಿಕಿರಿ “ಎಂದು ತಪಾಸಣಾ ಕೇಂದ್ರ(ಪುಟ್ಟ ಗೂಡು) ದೊಳಗೆ ಹೋದರೆ..ಅಲ್ಲಿ ಇರುವ ಒಬ್ಬಳಿಗೆ ಮತ್ತೆ ನನ್ನ ಸ್ಟಿಕ್ ಮೇಲೆ ಕಣ್ಣು ಬಿತ್ತು. “ತಪಾಸಣೆ ಮುಗಿಸಿ ಆಗಿದೆ..”ಎಂದರೆ “ಸಾಕ್ಷಿ ಏನಿದೆ..?” ಎನ್ನಬೇಕೇ..ನಾನು ಪೋಲೀಸ್ ರನ್ನು ತೋರಿಸಿ “ಅವರೇ ಮಾಡಿ ತಂದದ್ದು ..ಅವರನ್ನೇ ಕೇಳಿ..”ಎಂದರೆ ಅವರು ಕೇಳಲು ಸಿದ್ಧರಿಲ್ಲ…ಬದಲಿಗೆ “ಆಗುವುದಿಲ್ಲ.. ಪುನಃ ಮಾಡಿಸಬೇಕು.” ಎಂದರು.ಅಲ್ಲಿ ಹತ್ತು ಜನ ಪೋಲಿಸರು ಸ್ವಲ್ಪ ದೂರದಲ್ಲಿ ಮಾತನಾಡುತ್ತಾ ನಿಂತಿದ್ದರು..ಕರೆದು ಕೇಳಬಹುದಲ್ಲವೇ…?
ಅಜ್ಜ ಏನು ಸಮಸ್ಯೆ ಎಂದು ಕೇಳಲು ಬಂದರು. ಮತ್ತೆ..ಪುನಃ ವಿವರಗಳನ್ನು ಹೇಳಿದೆ..”ನಾನೇ ತೆಗೆದುಕೊಂಡು ಹೋಗ್ಲಾ..”ಎಂದು ಅಜ್ಜ ಕೇಳಲು “ಸರಿ..”ಎಂದು ಹೇಳಿ ಅಜ್ಜನ ಜೊತೆಗೆ ಇನ್ನೊಬ್ಬ ಮಹಿಳಾ ಗಾರ್ಡ್ ನ್ನು ಕಳಿಸಿದರು. ಸ್ವಲ್ಪ ದೂರ ಹೋಗುವಾಗ ಮೊದಲು ಸ್ಟಿಕ್ ತೆಗೆದುಕೊಂಡು ಹೋದ ಪೋಲಿಸರ ಕಣ್ಣು ನನ್ನತ್ತ ಹಾಯಿತು. ನಾನು ಅವರಿಗೆ ” ಇಲ್ಲಿಗೆ ನೀವು ಬಂದು ಸಾಕ್ಷಿ ಹೇಳಿ…ಇವರು ಕೇಳುವುದಿಲ್ಲ ..”ಎಂದು ಸನ್ನೆಯಲ್ಲೇ ಹೇಳಿದೆ..ಸಧ್ಯ..ಅವರಿಗೆ ಅರ್ಥವಾಯಿತು..ಅಜ್ಜನನ್ನು ವಾಪಾಸ್ ಕಳಿಸಿ..ಸಾಕ್ಷಿ ಹೇಳಲು ಬಂದರು. ಅಬ್ಬಾ ..ಒಂದು ಸಮಸ್ಯೆ ಮುಗಿಯಿತು…ಎನ್ನುವಾಗ ನನ್ನ ಅಂಗೈ ಅಗಲದ ಪರ್ಸಿನ ಜಿಪ್ ತೆಗೆದು ತೋರಿಸಿ..ಎಂದರು.
ಅದರಲ್ಲಿ ಹಣ,ಐಡಿ ಕಾರ್ಡ್, ಎಟಿಎಮ್ ಕಾರ್ಡ್ ಅಷ್ಟೇ ಕಾಣಿಸಿತು…”ಇಷ್ಟೇ ಅಲ್ವಾ” ಎಂದರು..”ಹೌದು..”ಎಂದೆ. ಅದರಲ್ಲಿ ಪೆನ್ ಡ್ರೈವ್ ಇದ್ದದ್ದು ಸಧ್ಯ ನನಗೆ ಮಾತ್ರ ಕಾಣಿಸಿತು.. ನನಗೆ ಅದರ ನೆನಪೇ ಇರಲಿಲ್ಲ. ಅಕಸ್ಮಾತ್ ಅವರಿಗೆ ಯಾರಿಗಾದರೂ ಕಾಣಿಸಿದಿದ್ದರೆ ನನ್ನ ಪರಿಸ್ಥಿತಿ ಇನ್ನೂ ಹದಗೆಡುತ್ತಿತ್ತು. ಬಿಡು ಅಲ್ಲಿಗೇ ಅವರ ತಪಾಸಣೆ ಮುಗಿಯಲಿಲ್ಲ. “ಕಾಲಿಗೆ ಸಾಕ್ಸ್ ಯಾಕೆ ಹಾಕಿದ್ದಿ. ಅದು ಸ್ವಲ್ಪ ದಪ್ಪ ಕಾಣುತ್ತಿದೆಯಲ್ಲಾ. ಏನಿಟ್ಟಿದ್ದೀ.”ಎಂದು ಕೇಳಿದರು. ನಾನು “ನನಗೆ ಕಾಲುನೋವಿದೆ. ಕಾಲಿನ ಅಡಿ ಒಂದು ತೂತು ಇದೆ. ಬರಿಗಾಲಲ್ಲಿ ನಡೆಯಲಾಗುವುದಿಲ್ಲ. ಈ ಊರುಗಳಲ್ಲಿ ಸಾಕ್ಸ್ ಹಾಕುವುದು ವಿಶೇಷವಲ್ಲ. ಮತ್ಯಾಕೆ ಅದಕ್ಕೂ ನಿಮ್ಮ ತಪಾಸಣೆ” ಎಂದು ರೋಸಿ ಹೋಗಿ ಕೇಳಿದೆ. ಆದರೂ ಒಬ್ಬರು “ಸಾಕ್ಸ್ ತೆಗೆದು ತೋರಿಸು..”ಎಂದರು. ಅಲ್ಲೇ ಇದ್ದ ಮತ್ತಿಬ್ಬರು “ಅವರನ್ನು ನೋಡುವಾಗ ನಿನಗೆ ಗೊತ್ತಾಗುವುದಿಲ್ವಾ..”ಎಂದು ಗದರಿದರು.
ಮತ್ತು ನನ್ನನ್ನು ಅಲ್ಲಿಂದ ಮುಂದೆ ಹೋಗಲು ಬಿಟ್ಟರು. ” ಬದುಕಿದೆಯಾ..ಬಡಜೀವವೇ..” ಎಂದು ಬೇಗಬೇಗನೆ ಹೆಜ್ಜೆ ಹಾಕಿದೆ. ಹೀಗೇ ಮತ್ತೆರಡು ಕಡೆ ತಪಾಸಣೆಗಳು ನಡೆದವು. ಆದರೆ ಮೊದಲಿನಷ್ಟು ಎಲ್ಲೂ ಸಮಸ್ಯೆ, ಕಿರಿಕಿರಿ ಆಗಲಿಲ್ಲ.. ಸುಮಾರು 2-3 ಕಿ.ಮೀ.ನಷ್ಟು ಚಕ್ರವ್ಯೂಹದಂತೆ ಸುತ್ತುಸುತ್ತು ಹಾಕಿ ಹೋದೆವು. ಒಬ್ಬರೇ ಹೋಗಬಹುದಾದಷ್ಟು ಕಿರಿದಾದ ಚಪ್ಪಡಿಕಲ್ಲು ಹಾಕಿದ ದಾರಿ. ಶುಭ್ರವಾಗಿದೆ. ಅಲ್ಲಲ್ಲಿ ನೀರು ಕುಡಿಯುವ ವ್ಯವಸ್ಥೆ ಇದೆ. ಎರಡೂ ಬದಿಯಲ್ಲೂ ಮುಳ್ಳಿನ ತಂತಿಯ ಬೇಲಿ ಹಾಕಿದೆ.