ಪುಟ್ಟೂ….,
ಕೋಲು ಪುರಾಣ ಬೋರಾಯ್ತಾ…ಕಂದಾ..😉
ನನಗೆ ನಿನ್ನ ನೆನಪು ತುಂಬಾ ಆಯಿತು. ನೀನು ಜೊತೆಯಲ್ಲಿದ್ದರೆ ಈ ಕೋಲಿನ ಸಹವಾಸ ಇರ್ತಿರಲಿಲ್ಲ..ಈ ಸೆಕ್ಯೂರಿಟಿಯ ಕಿರಿಕಿರಿಯೂ ಇರುತ್ತಿರಲಿಲ್ಲ..ಎಲ್ಲರೂ ಹೇಗೂ ನಿನ್ನನ್ನು ನನ್ನ ಕೋಲು ಎಂದು ಹೇಳುತ್ತಾರಲ್ಲಾ..😀 ಅಲ್ಲ ಕಣೇ ಚಿನ್ನು ಇವರದ್ದು ಸೆಕ್ಯೂರಿಟಿ.. ಅಂತೆ ಚೆಕ್ಕಿಂಗ್ ಅಂತೇ..ಅಲ್ಲಾ..ಭಯೋತ್ಪಾದಕರಾಗಲೀ,ಉಗ್ರಗಾಮಿಗಳಾಗಲೀ ಅದೂ ಈ ಆಧುನಿಕ ಯುಗದಲ್ಲಿ ಸಣ್ಣ ಚಿಪ್ ಗಳಿಂದಲೇ ಲಗಾಡಿ ತೆಗೆಯ ಬಹುದಾದ ಈ ಆಧುನಿಕ ಯುಗದಲ್ಲಿ ಇವರ ಕಣ್ಣು ಪೆನ್ ಡ್ರೈವ್ ಮೇಲೆ ಬೀಳದೆ ಕೋಲಿನ ಮೇಲೆ ಬಿದ್ದದ್ದು ನೋಡಿ ಬೇಸರ ವಾಯಿತು..ಭಯೋತ್ಪಾದಕರು,ಉಗ್ರಗಾಮಿಗಳು safe ಅಂತಾಯ್ತು…
ಇದೇನಾ ಸೆಕ್ಯೂರಿಟಿ..ಇವರದ್ದು ..ಎಂದು..ಸಿಟ್ಟೂ ಬಂದಿತ್ತು. ಆದರೆ ಮತ್ತೆ ನನಗೇ ಅನಿಸಿತು.. ನಂಬಲಿಕ್ಕೂ ಸಾಧ್ಯವಿಲ್ಲ..ಅಲ್ವಾ…ಪುಟ್ಟ ಕ್ಯಾಮರಾ, ಸ್ಫೋಟಕಗಳನ್ನು ಅಥವಾ ಇನ್ನೇನಾದರೂ ಈ ವೈಜ್ಞಾನಿಕ ಯುಗದಲ್ಲಿ ಕೋಲಿನಲ್ಲಿ ಅಡಗಿಸಿ ತರಬಹುದಲ್ವಾ..ತರುವ ಸಾಧ್ಯತೆಯೂ ಇದೆ..ಅಲ್ವಾ..?
ಮತ್ತೆ ಅವರೆಲ್ಲಾ “ಕ್ಷಮಿಸಿ…ನಿಮಗೆ ನಮ್ಮಿಂದ ತೊಂದರೆಯಾಯಿತು. ಏನು ಮಾಡುವುದು…ನಮ್ಮ ಕರ್ತವ್ಯ ಅಲ್ವಾ..” ಎಂದೂ ಹೇಳಿದರು. ಹೌದಲ್ವಾ..ಅವರು ನಾನು ಅಲ್ಲಿ ಸ್ಟಿಕ್..ಬರುವವರೆಗೆ ಕುಳಿತ್ತಿದ್ದೆನಲ್ಲಾ…ಆಗ ಅವರ ಸಂಸಾರ,ಪುಟ್ಟ ಮಕ್ಕಳು ಮತ್ತು ಈ ಕೆಲಸವನ್ನು ಹೊಂದಿಸಿ ಎಷ್ಟು ಕಷ್ಟ ಪಡ್ತಾರೆ ಎನ್ನುವುದನ್ನು.. ನನಗೆ ಹೇಳ್ತಾ ಕೂತಿದ್ದರು. ಆಗ ಪಾಪ ಅನಿಸಿತು..
ಇಷ್ಟೆಲ್ಲಾ ಆಗುವಾಗ ನಮ್ಮ ಸಹಯಾತ್ರಿಗಳು ಎಷ್ಟು ಮುಂದೆ ಹೋಗಿದ್ದರೋ..ನಮ್ಮ ಮಾರ್ಗದರ್ಶಿಗಳು ಮಾತ್ರ ಒಂದು ಮೂಲೆಯಲ್ಲಿ ವೀಕ್ಷಿಸುತ್ತಾ ನಮ್ಮನ್ನು ಕಾಯುತ್ತಿದ್ದರು. ಪಾಪ…ಅವರಿಗೆ ಇದು ಮೊದಲ ಅನುಭವವಂತೆ..ಅವರ ಕರ್ತವ್ಯ ಪ್ರಜ್ಞೆ ಮೆಚ್ಚುವಂತಹುದೇ…🙏
ಚಕ್ರವ್ಯೂಹದಲ್ಲಿ ಸುತ್ತು ಹೊಡ್ದೂ ಹೊಡ್ದೂ ಸಾಕಾಯ್ತು..ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ನಾನೂ ,ಅಜ್ಜ ನೀರನ್ನು ಕುಡಿದರೆ ತಡವಾದೀತು ಎಂದು..ನೀರು ಕುಡಿಯದೇ ಒಂದೇ ಸಮನೆ ನಡೆದೆವು ಎನ್ನುವ ಬದಲು ಓಡಿದೆವು ಎನ್ನುವುದೇ…ಸೂಕ್ತ.
ಅಂತೂ ರಾಮ ಸಿಕ್ಕಿದ್ದ.. ಆದ ಸುಸ್ತೆಲ್ಲಾ ಒಂದು ಸಲ ಮರೆತಂತಾಯಿತು. ಆದರೆ ಅವನಾದರೋ ಒಂದು ಟೆಂಟ್ ಲ್ಲಿ ಇದ್ದ..ಬಹುಶಃ ಅಂದು ವನವಾಸದಲ್ಲಿ ಪರ್ಣಕುಟೀರದಲ್ಲಿದ್ದ..ಅನುಭವ ಮಾತ್ರ..ಇದ್ದದ್ದು ಅಲ್ಲವಾ..ಈಗ ಈ ಅನುಭವವೂ ಇರಲೆಂದು ಏನೋ ಬಹುಶಃ ಟೆಂಟ್ನಲ್ಲಿ ಇದ್ದ ಪುರುಷೋತ್ತಮ..ಅನಿಸಿತು. ಹದಿನೈದು ಇಪ್ಪತ್ತು ಅಡಿ ದೂರದಿಂದ ನೋಡಬೇಕು.ಅದೂ ಒಂದೆರಡು ನಿಮಿಷ ಮಾತ್ರ. ತಿರುಪತಿಯಲ್ಲಾದರೂ..ಮೂರು ನಿಮಿಷಕ್ಕಿಂತಲೂ ಹೆಚ್ಚು ತಿಮ್ಮಪ್ಪನನ್ನು ನೋಡಬಹುದು..ಅಕ್ಕಪಕ್ಕದವರ ಬೈಗಳನ್ನು ಸಹಿಸಿಕೊಂಡರೆ ಸಾಕು. ಇಲ್ಲೋ ಸೆಕ್ಯೂರಿಟಿಯವರು “ಚಲೋ… ಚಲೋ…” ಎಂದು ಲಾಟಿಯನ್ನು ಬೀಸಿಯೇ ಬಿಡುತ್ತಾರೆ. ನಾವು ಹೋದಾಗ ಅದೂ ಐದಾರು ಜನ ಮಾತ್ರ ಇದ್ದರು..ಆದರೂ ನಮ್ಮ ಮುಂದಿನವರನ್ನು ಹೀಗೆ ಓಡಿಸಿಯೇ ಬಿಟ್ಟರು..ಅಲ್ಲಿ ಒಬ್ಬರು ಅರ್ಚಕರು ನಾಲ್ಕು ಕಾಳು ಸಕ್ರೆ ಕಡ್ಲೆಯನ್ನು ಪ್ರಸಾದ ಎಂದು ಕೈ ಮೇಲೆ ಹಾಕ್ತಾರೆ. ಅಷ್ಟು ಹೊತ್ತು ರಾಮನನ್ನು ನೋಡಬಹುದು. ಕಡ್ಲೆ ಕೈಗೆ ಬೀಳುತ್ತೋ..ಕೆಳಗೆ ಬೀಳುತ್ತೋ ಎಂದು ಗಮನಿಸಲು ನಿಂತರೆ ರಾಮನನ್ನು ಕಣ್ತುಂಬಾ ನೋಡುವ ಸಮಯದಿಂದ ವಂಚಿತರಾಗುತ್ತೇವೆ…ದೂರದಿಂದ ನೋಡುತ್ತಾ ಬರಬಹುದೇ ವಿನಃ ಎದುರು ನಿಂತು ಕೈಮುಗಿದು ಭಕ್ತಿಯಿಂದ ನಮಸ್ಕಾರ ಮಾಡಲು ಸಮಯಾವಕಾಶವಿಲ್ಲ. ನಾನೇನು ಮಾಡಿದೆ ಗೊತ್ತಾ…? ಅರ್ಚಕರ ಪಕ್ಕದಲ್ಲಿ ಕುಳಿತಿದ್ದ ಮಹಿಳಾ ಪೋಲಿಸ್ ಅಧಿಕಾರಿಯ ಹತ್ತಿರ ಮಾತನಾಡುತ್ತಾ ಕಣ್ಣು ಮಾತ್ರ ರಾಮನ ಮೇಲಿಂದ ಕೀಳದೆ ಕಣ್ತುಂಬಾ ನೋಡಿದೆ…ಅಲ್ಲಾ ಮತ್ತೆ ಅಷ್ಟು ಕಷ್ಟ ಪಟ್ಟು ಹೋಗಿ ಸರಿಯಾಗಿ ನೋಡದೆ ಬರುವುದಾ…!!???
ಆರಿದ ಗಂಟಲಿಗೆ ಕಡ್ಲೆ ಕಾಳು ಎಸೆದು ಮುಂದುವರಿದು ಬಂದರೆ ಅಗಲವಾದ ರಸ್ತೆ..ದಾರಿಯುದ್ದಕ್ಕೂ ಪೋಲಿಸ್ ಜೀಪು, ವ್ಯಾನ್, ಯುದ್ದದಲ್ಲಿ ಬಳಸುವಂತಹ ವಾಹನಗಳು ಒಂದು ರಾಶಿ ಪೋಲಿಸನವರು ಸೆಕ್ಯೂರಿಟಿಗಳು. ಅವರ ಉಪಯೋಗಕ್ಕೆ ಕುದುರೆಗಳು..ಎಲ್ಲವೂ ಇತ್ತು. ಆದರೆ ಈ ವಾಹನಗಳ ವ್ಯವಸ್ಥೆ ಯಾತ್ರಿಕರಿಗೆಂದು ಮಾತ್ರ ಇಲ್ಲ, ಅವರಿಗಾಗಿ ಚಂದದ ಅಗಲವಾದ ರಸ್ತೆ ಮಾತ್ರ ಇದೆ.ನಿರಾಶೆಯಾಯಿತು. ಒಂದು-ಒಂದುವರೆ ಕಿಮೀ ನಡೆದು ಬಂದಾಗ ಅಲ್ಲಲ್ಲಿ ಅಂಗಡಿ ಸಾಲುಗಳು,ಶಾಪಿಂಗ್ ಮಾಡ್ತಾ ನಮ್ಮ ಆಗಮನವನ್ನು ಕಾಯ್ತಾ ಇರುವ ನಮ್ಮ ಜೊತೆಯವರು…
ನಾನು ಹೋಗುವಾಗ ನಿನ್ನ ಚಿಕ್ಕಪ್ಪಂದಿರು ಅಯೋಧ್ಯೆಯ ನೆನಪಿಗಾಗಿ ಕರಸೇವೆಯ ಸಿಡಿಗಳನ್ನು ..ಇನ್ನೂ ಕೆಲವು ವಸ್ತುಗಳನ್ನು ಹೇಳಿದ್ದರು. ಅವಸರ ಅವಸರದಲ್ಲಿಯೇ ಅವುಗಳನ್ನೆಲ್ಲಾ ಎರಡೇ ನಿಮಿಷದಲ್ಲಿ ತೆಗೆದುಕೊಂಡು ಹೊರಟೆವು. ಅಲ್ಲೊಂದು ಸೈಕಲ್ ರಿಕ್ಷಾ ಇತ್ತು. ಅದರಲ್ಲಿ ಏರಿ “ಜೈ ಭಜರಂಗ ಬಲಿ” ಎಂದು ಹನುಮಂತನ ದೇವಸ್ಥಾನಕ್ಕೆ ಬಂದೆವು. ಉಳಿದವರೆಲ್ಲರೂ ಅಲ್ಲಿಗೆ ಕಾಲ್ನಡಿಗೆಯಲ್ಲಿ ಬಂದು ನಮಗಾಗಿ ಕಾಯುತ್ತಿದ್ದರು. “ಅಬ್ಬಾ….” ಬಂದೆವಲ್ಲಾ ಎಂದು ಒಂದು ದೀರ್ಘವಾದ ಉಸಿರು ಬಿಟ್ಟು ನೋಡಿದರೆ ಆ ಆಂಜನೇಯನನ್ನು ನೋಡಬೇಕಾದರೆ ಎಂಬತ್ತರಿಂದ ನೂರು ಮೆಟ್ಟಲು ಕಾಣಿಸಿದವು.. ಚಕ್ರವ್ಯೂಹವನ್ನು ಹೇಗೋ ದಾಟಿ ಬಂದರೆ ಇಲ್ಲಿ ಮೆಟ್ಟಲುಗಳನ್ನು ಹೇಗೆ ಹತ್ತಲಿ ಎಂದು ನನ್ನಿಂದ ಸಾಧ್ಯವೇ!!? ಅದೂ ಈಗಾಗಲೇ ಐದಾರು ಕಿ.ಮೀ. ನಡೆದು ಕಾಲುಗಳು ಮಾತನಾಡ ತೊಡಗಿದ್ದವು.. ಹಾಗೆಂದ ಇಷ್ಟು ದೂರ ಬಂದು ರಾಮನನ್ನು ನೋಡಿ ಅವನ ದಾಸನನ್ನು ನೋಡದೆ ಹೋಗುವುದೇ..ಇಲ್ಲ ಅದೂ ಇಷ್ಟವಿಲ್ಲದ ಕೆಲಸ. ಏನು ಮಾಡಲಿ ಎಂದು ಬೆಟ್ಟದ ಮೇಲಿನ ಗುಡಿಯನ್ನು ನೋಡುತ್ತಾ ನಿಂತೆ. ಎಲ್ಲರೂ “ನಿಮಗೆ ಆಗಲಿಕ್ಕಿಲ್ಲ. ನೀವು ಇಲ್ಲೇ ಕೂತಿರಿ.” ಎಂದು ಹೇಳಿ ಜೊತೆಯವರು ಮೆಟ್ಟಲು ಹತ್ತಲು ಪ್ರಾರಂಭಿಸಿದರೆ, ಇನ್ನು ಕೆಲವರು ಕೆಳಗೆ ಮೆಟ್ಟಲಿನ ಮೇಲೆ ಕುಳಿತರು. ನಿನ್ನ ಅಜ್ಜ”ನಿನಗೆ ಆಗುತ್ತಾ..ಆಗದಿದ್ದರೆ ಬೇಡಾ, ಇಲ್ಲಿಯೇ ಕುಳಿತು ಕೊಳ್ಳುವಾ ಅಥವಾ ಶಾಪಿಂಗ್ ಮಾಡುವಾ..” ಎಂದರು. ನಾನು ” ನೋಡುವಾ..ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಹತ್ತುವೆನು. ಆಗದಿದ್ದರೆ ಅಲ್ಲೇ ಮೆಟ್ಟಲಿನ ಮೇಲೆ ಕೂರುತ್ತೇನೆ. ಹೋಗುವುದು…ಹೋಗುವುದೇ.” ಎಂದು ಅಜ್ಜನಿಗೆ ಹೇಳಿದೆ. ಮನಸ್ಸಿನಲ್ಲಿ “ಹನುಮಂತಾ.. ನಿನ್ನನ್ನು ನೋಡುವ ಆಸೆ. ನಿನಗೂ ನಾನು ನಿನ್ನ ದರ್ಶನ ಪಡೆಯಬೇಕೆಂಬ ಅಪೇಕ್ಷೆ ಇದ್ದಲ್ಲಿ ನನ್ನನ್ನು ನಿನ್ನವರೆಗೆ ಕರೆದೊಯ್ಯುವ ಶಕ್ತಿಯನ್ನು ನನ್ನ ಕಾಲುಗಳಿಗೆ ಕೊಡು..” ಎಂದು ಬೇಡಿ ಮೆಟ್ಟಲು ಹತ್ತ ತೊಡಗಿದೆ. ಏನೂ ಸಮಸ್ಯೆಯಿಲ್ಲದೆ ಹತ್ತಿಯೇ ಬಿಟ್ಟೆ ಕಣೇ ಡುಮ್ಮಕ್ಕಾ..
👍👍😍
ಅಲ್ಲಿ ಇನ್ನೂ ತೆರೆ ಸರಿಸಿರಲಿಲ್ಲ.ಇಲ್ಲಿ ದೇವಸ್ಥಾನಕ್ಕೆ ಬಾಗಿಲೇ ಇಲ್ಲ. ತೆರೆ ಹಾಕಿರುತ್ತಾರೆ ಅಷ್ಟೇ. ಸುತ್ತಲಿನ ಪೌಳಿ ವಿಶಾಲವಾಗಿತ್ತು. ತೆರೆ ಸರಿದೊಡನೆ ಹನುಮಂತ ಕಾಣುವಂತೆ ಜಾಗ ನೋಡಿ ಕುಳಿತುಕೊಂಡೆ. ತುಂಬಾ ಜನ ಇದ್ದು ನೂಕು ನುಗ್ಗಲು ಇತ್ತು. ತೆರೆ ತೆಗೆಯುವವರೆಗೆ ಭಜನೆಯನ್ನಾದರೂ ಮಾಡೋಣವೆಂದು ಎದುರಿನ ಪೌಳಿಯ ಜಗಲಿಯ ಮೇಲೆ ಕುಳಿತೆವು. ಅಷ್ಟರಲ್ಲಿ ಪಡಿಯಾರ ಮಾಮಾನವರು ರಾಮನಾಮ ಹೇಳುವಾ ಎಂದು ಪ್ರಾರಂಭಿಸಿದರು. ನಿಜ ಭಜನೆಗಿಂತಲೂ ಅಲ್ಲಿ ರಾಮನಾಮವೇ ಸಮೀಚೀನವಾಗಿತ್ತು ಎಂದೆನಿಸಿತು. ಹತ್ತು ನಿಮಿಷದ ರಾಮನಾಮ ಪಠಣ ಆಗುವಾಗ ತೆರೆ ಸರಿಯಿತು. ಸುಮಾರು ಎರಡುವರೆ ಮೂರು ಅಡಿ ಎತ್ತರದ ಹನುಮನ ದರ್ಶನವೂ ಆಯಿತು..ಆರತಿಯೂ ಆಯಿತು. ಆ ನಂತರ ಮೇಲಿನಿಂದ ಸುತ್ತಲೂ ವೀಕ್ಷಿಸಿದರೆ ಯಾವುದೇ ಮನಸ್ಸಿನಲ್ಲಿ ಉಳಿಯುವಂತಹ ಆಕರ್ಷಣೆವುಳ್ಳ ದೃಶ್ಯ ಕಾಣಿಸಲಿಲ್ಲ. ಕೆಳಗೆ ಇಳಿದು ಬಂದೆವು. ತುಂಬಾ ಅಂಗಡಿಗಳು,ಮನೆಗಳೂ ಇವೆಯೋ ಇಲ್ಲವೋ ಗೊತ್ತಾಗಲಿಲ್ಲ. ರಾಶಿ ಜನರಿದ್ದು ತುಂಬಾ ವ್ಯಸ್ತವಾದ ಊರು ಅಂದರೆ Busy Town ಅನ್ನ ಬಹುದೇನೋ.. ಆದರೆ ಚಂದದ ವ್ತವಸ್ಥಿತವಾದ ಊರು ಅನಿಸಿಲ್ಲ. ಎಲ್ಲರೂ ಗಡಿಬಿಡಿಯಲ್ಲಿ,ಧಾವಂತದಿಂದ ಓಡಾಡುವ ಜನರು ಕಾಣುತ್ತಿದ್ದರು.ಆಟೋದಲ್ಲಿ ನಾವು ಇಳಿದುಕೊಂಡ ಛತ್ರಕ್ಕೆ ಒಂದು ನೂರು/ ನೂರಿಪ್ಪತ್ತು ಮೀಟರ್ ಮೊದಲೇ ಆಟೋ ನಿಲ್ಲಿಸಿ ಇಳಿಸಿದರು. ಅಲ್ಲೊಂದು ದೇವಸ್ಥಾನ ವಿದೆ. ಅದನ್ನು ಸಧ್ಯದ “ರಾಮಮಂದಿರ”ವೆಂದೂ ರಾಮಮಂದಿರ ಆದ ನಂತರ ಪ್ರತಿಷ್ಠಾಪಿಸುವ ಚಿನ್ನದ ಮೂರ್ತಿಯನ್ನು ಅಲ್ಲೇ ಇಟ್ಟಿರುವರೆಂದು ತೋರಿಸಿದರು. ದೇವಸ್ಥಾನ ವಿಶಾಲವಾಗಿ,ಸುಂದರವಾಗಿತ್ತು. ಅಲ್ಲೇ ದೇವಾಲಯದ ಪ್ರಾಂಗಣದಲ್ಲಿ ಬಲ ಬದಿಯಲ್ಲಿ ಒಂದು ಸಣ್ಣ ಹಾಲ್ ಇದೆ. ಅಲ್ಲೊಬ್ಬರು ಸಾಧು ಮಹಾರಾಜ್ ಇದ್ದಾರೆ. ಅವರು ರಾಮಮಂದಿರ ಆಗುವವರೆಗೆ ಆಹಾರವನ್ನು ತ್ಯಾಗ ಮಾಡಿದ್ದಾರೆ. ಮೌನವ್ರತಧಾರಣೆ ಮಾಡಿದ್ದಾರೆ. ಬರೀ ರಾಮನಾಮ ಜಪ ಮಾಡ್ತಾ ಇರ್ತಾರೆ. ಅವರನ್ನು ನೋಡಿ ಅಲ್ಲಿಂದ ಹೊರಬಂದೆವು. ಹಾಲಿನ ತುಂಬಾ ಜನ ಕುಳಿತು ರಾಮನಾಮ ಜಪವನ್ನು ಮಾಡ್ತಾ ಇದ್ದರು. ದೇವಸ್ಥಾನದ ಎಡ ಬದಿಯಲ್ಲಿ ಒಂದು ದೊಡ್ಡ ಹಾಲ್ ಮತ್ತು ಪಾಕಶಾಲೆ ಇದೆ. ಆಧುನಿಕ ರೀತಿಯ ಆ ಪಾಕಶಾಲೆಯ ಹೆಸರು “ಸೀತಾ ರಸೋಯಿ”. ನಿತ್ಯವೂ ಅನ್ನದಾನ ನಡೆಯುತ್ತದೆ. ದಾರಿಯುದ್ದಕ್ಕೂ ಪಾಳು ಬಿದ್ದ, ಬಣ್ಣಗೆಟ್ಟ ಹಳೆಯ, ಪುರಾತನ ಶೈಲಿಯ ಮನೆಗಳು. ಹಾಗೆಂದು ಮನುಷ್ಯರಿಲ್ಲ ಅಂದ್ಕೋಬೇಡಾ..ಚಿನ್ನಿ. ವಾಸವಿದ್ದಾರೆ. ಯಾವ ಮನೆಯೂ ಖಾಲಿಯಿಲ್ಲ. ಒಂದು ರೀತಿಯ ಬಿಗುವಾದ ಗಂಭೀರ ವಾತಾವರಣ. ನಮ್ಮಲ್ಲಿರುವ ಉಲ್ಲಾಸವನ್ನೂ, ಉತ್ಸಾಹವನ್ನೂ ಮರೆಮಾಚಿಸುವ ವಾತಾವರಣ. ಅಲ್ಲಿಂದ ಹೊರಬಂದು ಬಿಸಿಬಿಸಿ ಚಹಾವನ್ನು ಮುಂದಿನ ಪಯಣದ ಸ್ಫೂರ್ತಿಗಾಗಿ ಕುಡಿದೆವು. ಆಗಲೇ ಆ ಚಾಯ್ವಾಲಾ ಹತ್ತಿರ “ಇಲ್ಯಾಕೆ ಈ ರೀತಿಯ ಬಿಗುವಾತಾವರಣ..ಮನೆಗಳೆಲ್ಲಾ ಯಾಕೆ ಕಳೆಗುಂದಿವೆ.” ಎಂದು ಕೇಳಿದೆ. ಆತ “ಯಾವಾಗ ಗಲಭೆಯಾಗುತ್ತದೆ ಎನ್ನುವ ಸೂಚನೆ ಇಲ್ಲಿ ಸಿಗುವುದಿಲ್ಲ. ಯಾವಾಗ 144 ಘೋಷಣೆ ಆಗುತ್ತದೆ ಎನ್ನುವ ಚಿಂತೆ..ಮೇಮ್ ಸಾಬ್” ಎಂದ.
ನಾನು ಎಲ್ಲೆಂದರಲ್ಲಿ ಗಾಡಿ ಸಿಕ್ಕಿದಲ್ಲೆಲ್ಲಾ “ಅದ್ರಕ್ ಚಾಯ್” ಕುಡಿಯುತ್ತಿದ್ದೆವು. ಅದೂ ಸಣ್ಣಸಣ್ಣ ಮಣ್ಣಿನ ಪುಟ್ಟಿಯಲ್ಲಿ ಕೇವಲ ಮೂರು ರೂಪಾಯಿಗೆ ಕೊಡುತ್ತಿದ್ದರು. ಮನೆ ಬಿಟ್ಟು ಹೊರಗೆಲ್ಲೂ ಚಹಾ ಕುಡಿಯದ ನನಗೆ ಈ ಮಡಿಕೆಯ ಚಹಾ ತುಂಬಾ ಆಕರ್ಷಿಸಿದೆ. ಅಷ್ಟೇ ಅಲ್ಲ ನಾನು ಆಯಾ ಊರಿನ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಚೆನ್ನಾಗಿ ಉತ್ತರವನ್ನೂ ಕೊಡ್ತಾರೆ.
ಚಹಾ ಕುಡಿದು ಛತ್ರದ ಹತ್ತಿರ ನಿಂತ ಬಸ್ಸಿನ ಬಳಿ ಬಂದೆವು.ಛತ್ರದ ಎದುರುಗಡೆ ಒಂದು ದೊಡ್ಡ ತಗಡಿನ ಮಾಡು. ಸುತ್ತಲೂ ಕಲ್ಲಿನ ಕಾಂಪೌಂಡ್ ಇತ್ತು. ಅದರ ಒಳಗೆ ಹೋದೆವು. ಅದ್ಭುತವಾದ ದೃಶ್ಯವಿತ್ತು. ಶ್ರೀ ರಾಮಮಂದಿರದ ಸಣ್ಣ ಮಾದರಿಯನ್ನು ಮಾಡಿ ಒಂದು ಗಾಜಿನ ಪೆಟ್ಟಿಗೆಯಲ್ಲಿ ಇಟ್ಟಿದ್ದಾರೆ. ಒಂದು ಪೇಪರ್ನ ಮೇಲೆ ನೀಲಿ ನಕ್ಷೆಯನ್ನು ಬರೆದು ಗಾಜಿನ ಪೆಟ್ಟಿಗೆಯಲ್ಲಿ ಹರಡಿ ಇಟ್ಟಿದ್ದಾರೆ. ದೇವಾಲಯಕ್ಕೆ ಬೇಕಾದ ಕಲ್ಲಿನ ವಿವಿಧ ಚಿತ್ತಾರದ ಕಂಬಗಳು,ನವರಂಗದ ಅಟ್ಟಣಿಗೆ, ಸುತ್ತಲಿನ ಪೌಳಿಗಳ ಮುಚ್ಚಿಗೆ, ಕಂಬಗಳು ಎಲ್ಲವೂ ಕೆತ್ತಿ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದಾರೆ. ಇನ್ನೂ ಕೆತ್ತನೆಯ ಕಾಮಗಾರಿ ಶಿಲ್ಪಿಗಳಿಂದ ನಡೆಯುತ್ತಲೇ ಇದೆ.
ಕೋರ್ಟು ಯಾವತ್ತು ಮಂದಿರ ಕಟ್ಟಲು ಒಪ್ಪಿಗೆ ನೀಡುತ್ತೋ ಆಗ ಒಂದೇ ರಾತ್ರಿಯಲ್ಲಿ ಮಂದಿರ ಕಟ್ಟಬೇಕೆಂಬ ಚಿಂತನೆಯಿಂದ ಈ ವ್ಯವಸ್ಥೆಗಳನ್ನು ಮಾಡಿಟ್ಟುಕೊಳ್ಳುತ್ತಿದ್ದಾರಂತೆ.
ಇದನ್ನೆಲ್ಲಾ ನೋಡಿಯಾದ ಮೇಲೆ ವಾರಾಣಾಸಿಗೆ ಹಿಂದಿರುಗಿ ನಮ್ಮ ವಸತಿ ಕೇಂದ್ರ “ಪ್ಲಾಜಾ಼ ಇನ್ನಾ” ಗೆ ತಲುಪಿದೆವು.
ಗುಡ್ನೈಟ್ ಬಂಗಾರಿ..
ಶುಭರಾತ್ರಿ ಸಿಂಗಾರಿ,ಚಿನ್ನು ಮರಿ..😍😍