ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿಯೇ ತೀರಬೇಕೆಂದು ಪಣತೊಟ್ಟಿರುವ ಪ್ರತಿಪಕ್ಷಗಳು ಮೈತ್ರಿಕೂಟ ’ಇಂಡಿಯಾ’ ಅನ್ನು ಬಲಪಡಿಸಲು ಶ್ರಮಿಸುತ್ತಿವೆ. ಇದರ ಅಂಗವಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ವಿಪಕ್ಷಗಳ ಎರಡನೇ ಸಭೆ ನಡೆಸಲಾಗಿದೆ. ಬೆಂಗಳೂರಿನ ಸಭೆಯಲ್ಲಿ ಜಾತಿ ಗಣತಿ, ಮಣಿಪುರ ಹಿಂಸಾಚಾರದಿಂದ ಹಿಡಿದು ರಾಜ್ಯಪಾಲರು ಮತ್ತು ಎಲ್ಜಿಗಳ ಪಾತ್ರ ಮತ್ತು ನೋಟು ಅಮಾನ್ಯೀಕರಣದವರೆಗಿನ ವಿವಿಧ ವಿಷಯಗಳ ಕುರಿತು ಪ್ರಸ್ತಾಪಿಸುವ ‘ಸಾಮೂಹಿಕ ಸಂಕಲ್ಪ್’ ಘೋಷಣೆಯನ್ನು ಸಹ ಇಂಡಿಯನ್ ನ್ಯಾಷನಲ್ ಡೆಮಾಕ್ರಟಿಕ್ ಇನ್ಕ್ಲೂಸಿವ್ ಅಲೈನ್ಸ್ ಬಿಡುಗಡೆ ಮಾಡಿದೆ. ಆದರೆ ವಿಪಕ್ಷಗಳಿಗೆ ಎನ್ಡಿಎ ಬಣವನ್ನು ಸೋಲಿಸಿ ಅಧಿಕಾರದ ಗದ್ದುಗೆಯನ್ನು ಹಿಡಿಯುವ ಹಾದಿ ಅಷ್ಟೊಂದು ಸುಲಭದ್ದಲ್ಲ. ಈ ಮೈತ್ರಿಕೂಟದ ಮುಂದೆ ಸವಾಲುಗಳ ದೊಡ್ಡ ಪಟ್ಟಿಯೇ ಇದೆ.
ವಿಪಕ್ಷಗಳ ಮೈತ್ರಿಕೂಟದಲ್ಲಿ 24 ಪಕ್ಷಗಳಿದ್ದು ಅವುಗಳನ್ನೆಲ್ಲಾ ಒಗ್ಗೂಡಿಸಿಕೊಂಡು ಮುನ್ನಡೆಸುವವರು ಯಾರು ಎಂಬುದೇ ಇಂಡಿಯನ್ ನ್ಯಾಷನಲ್ ಡೆಮಾಕ್ರಟಿಕ್ ಇನ್ಕ್ಲೂಸಿವ್ ಅಲೈನ್ಸ್ ನಲ್ಲಿ ಎದ್ದಿರುವ ಮೊದಲ ಪ್ರಶ್ನೆಯಾಗಿದೆ. ವಿಪಕ್ಷಗಳನ್ನು ಮುನ್ನಡೆಸಿಕೊಂಡು ಹೋಗಲು ಸಮರ್ಥ ನಾಯಕನ ಕೊರತೆ ಇರುವುದು ಎದ್ದು ಕಾಣುತ್ತಿದ್ದು, ಇದು ಎನ್ಡಿಎ ಬಣದ ಟೀಕೆಗೂ ಕಾರಣವಾಗುತ್ತಿದೆ. ಇನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ನಾಯಕನ ಪಟ್ಟದಲ್ಲಿ ಕೂರಿಸಲು ಮೈತ್ರಿಕೂಟ ಪೂರ್ಣಪ್ರಮಾಣದಲ್ಲಿ ಸಿದ್ದವಿಲ್ಲ. ರಾಹುಲ್ಗಾಂಧಿಯಲ್ಲಿ ಯಾವುದೇ ನಾಯಕತ್ವದ ಗುಣವಿಲ್ಲ ಎಂಬ ವಿಷಯವನ್ನಿಟ್ಟುಕೊಂಡು ಟ್ರೋಲ್ಗಳು ಆಗುತ್ತಿದ್ದು, ವಿಪಕ್ಷಗಳ ಒಕ್ಕೂಟಕ್ಕೂ ರಾಹುಲ್ಗಾಂಧಿ ಮೇಲೆ ಪೂರ್ಣ ಪ್ರಮಾಣದ ನಂಬಿಕೆ ಬಂದಂತೆ ಕಾಣುತ್ತಿಲ್ಲ. ಹಾಗೆಯೇ ಮೈತ್ರಿಕೂಟದಲ್ಲಿ ಯಾರ ಸ್ಥಾನ ಏನೇನು ಜವಾಬ್ದಾರಿಗಳೇನು ಎಂಬುದು ಇನ್ನೂ ಕೂಡಾ ನಿರ್ಣಯವಾಗಿಲ್ಲ.ಆದ್ದರಿಂದ ವಿಪಕ್ಷಗಳ ಒಕ್ಕೂಟದ ಆರು ಮಂದಿ ಹಾಲಿ ಮುಖ್ಯಮಂತ್ರಿಗಳು ತಾವೇ ಮುಂಚೂಣಿಯಲ್ಲಿರಬೇಕು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ ನಡೆಯುತ್ತಿದ್ದು, 24 ಪಕ್ಷಗಳು ಬೇರೆ ಬೇರೆ ರಾಜ್ಯಗಳಲ್ಲಿ ಸ್ಪರ್ಧಿಗಳಾಗಿವೆ. ಅವುಗಳಲ್ಲಿ ಒಗ್ಗಟಿನ ಸ್ಫರ್ಧೆ ನಡೆಯುವುದಿಲ್ಲ ಮತ್ತು ವಿಪಕ್ಷ ಒಕ್ಕೂಟದ ಒಳಗಿನ ನಾಯಕರಗಳ ನಡುವೆಯೇ ಪೈಪೋಟಿ ಉಂಟಾಗುವ ಸಾಧ್ಯತೆಯೇ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಒಕ್ಕೂಟದಲ್ಲಿರುವ ಎಎಪಿ, ತೃಣಮೂಲ ಕಾಂಗ್ರೆಸ್ ಪಕ್ಷಗಳೇ ನೇರ ಸ್ಪರ್ಧಿಗಳಾಗಿವೆ. ಪಂಜಾಬ್ನಲ್ಲಿ ಆಮ್ ಆದ್ಮಿಯ ಬದ್ಧ ವೈರಿ ಹಾಗೂ ನೇರ ಸೆಣಸಾಟ ಇರುವುದು ಕಾಂಗ್ರೆಸ್ ಜೊತೆಗೆ. ಇನ್ನು ಅದೇ ಕಾಂಗ್ರೆಸ್ಗೆ ದೆಹಲಿ ರಾಜಕಾರಣದಲ್ಲಿ ಆಮ್ ಆದ್ಮಿ ಪಕ್ಷದ ಬೆಂಬಲ ನಿಲ್ಲಲು ಸಿದ್ಧವಿಲ್ಲ, ಆದರೆ ಲೋಕಸಭೆಗೆ ಮಾತ್ರ ಆಮ್ ಆದ್ಮಿ ಜೊತೆಗೆ ಕೈ ಜೋಡಿಸಲು ಸಿದ್ದವಾಗಿದೆ. ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬದ್ಧ ವೈರಿಗಳು, ತೃಣಮೂಲ ಕಾಂಗ್ರೆಸ್ ಕಾರಣದಿಂದಾಗಿಯೇ ಕಾಂಗ್ರೆಸ್ ನೆಲಕಚ್ಚಿಹೋಗಿದೆ ಎಂಬ ಮಾತು ಕೂಡ ಕೇಳಿ ಬಂದಿದೆ. ತಮಿಳುನಾಡು, ಕೇರಳದಲ್ಲೂ ತ್ರಿಕೋನ ಸ್ಪರ್ಧೆ ಇಲ್ಲ, ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ನೇರ ಸ್ಪರ್ಧೆ ಇದೆ. ಲೋಕಸಭೆಯಲ್ಲಿ ಪ್ರಮುಖ ಜವಾಬ್ದಾರಿ ನೀಡಲು ಕಾಂಗ್ರೆಸ್ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ನೆಚ್ಚಿಕೊಂಡಿದೆ. ವಿಧಾನಸಭೆಗೆ ಒಂದು ಸೂತ್ರ, ಲೋಕಸಭೆಗೆ ಇನ್ನೊಂದು ಸೂತ್ರ ಎಂಬಂತಿದೆ ಸದ್ಯದ ಲೆಕ್ಕಚಾರ ಆದರೆ ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ನೇರ ಸ್ಪರ್ಧೆ ಇರುವ ಪಕ್ಷಗಳೊಂದಿಗೆ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಮಾಡಿಕೊಳ್ಳುತ್ತಿರುವ ಒಕ್ಕೂಟ ಬಾಂಧವ್ಯ ಹೇಗೆ ವರ್ಕ್ ಆಗಬಹುದು ಎಂಬುದು ಸದ್ಯದ ಕುತೂಹಲವಾಗಿದೆ.
ಬರುವ ನವೆಂಬರ್ ಒಳಗಾಗಿ ಇನ್ನೂ ಮೂರು ಸುತ್ತಿನ ಸಭೆ ನಡೆಸಲು ಬಿಜೆಪಿಯೇತರ ವಿರೋಧ ಪಕ್ಷಗಳ ನಾಯಕರು ತೀರ್ಮಾನ ಮಾಡಿದ್ದಾರೆ. ಆದರೆ ಇದರ ಮಧ್ಯೆ ಕೆಲವು ರಾಜ್ಯದಲ್ಲಿ ಬಿಜೆಪಿಯ ಅಲೆಗೆ ವಿಪಕ್ಷಗಳು ಛಿಧ್ರಗೊಳ್ಳುತ್ತಿವೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಅಜಿತ್ಪವಾರ್ ಮೂಲ ಪಕ್ಷವನ್ನು ತೊರೆದು ಬಿಜೆಪಿ ಬಣವನ್ನು ಸೇರಿರುವುದು ಇದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ. ಇನ್ನು ಹಲವು ವಿಪಕ್ಷಗಳು ಬಿಜೆಪಿಯ ಅಲೆಯಲ್ಲಿ ಸಿಲುಕಿ ಕೊಚ್ಚಿಹೋಗುವ ಸಾಧ್ಯತೆಗಳಿವೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.